
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋಮು ಘರ್ಷಣೆ, ಮತ್ತು ಅಸಹನೆಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದ ಸಾಹಿತಿಗಳ ಬೆಂಬಲಕ್ಕೆ ನಿಂತಿದ್ದ ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿ ಅವರು ತಮಗೆ ಬಂದ ಟೀಕೆಗಳಿಗೆ ಉತ್ತರಿಸಿದ್ದು, 'ಮೋದಿ ಭಕ್ತರ' ಟೀಕೆಯಲ್ಲಿ ಹುರುಳಿಲ್ಲ ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಆದರೆ ನಾನು ಹಿಂಸಾಚಾರದ ವಿರೋಧಿ ಎಂದಿದ್ದಾರೆ.
ಎಂ ಎಂ ಕಲ್ಬುರ್ಗಿ ಮತ್ತು ದಾಧ್ರಿ ಘಟನೆಯನ್ನು ವಿರೋಧಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದ ನಯನತಾರ ಸೈಗಲ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ ರಶ್ದಿ ಅವರಿಗೆ ದ್ವೇಷದ ಸಂದೇಶಗಳನ್ನು ಹಲವರು ಕಳುಹಿಸಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ರಶ್ದಿ ಮತ್ತೊಂದು ಟ್ವೀಟ್ ನಲ್ಲಿ "ಇಲ್ಲಿ ಮೋದಿ ಭಕ್ತರು ಬಂದಿದ್ದಾರೆ. ಭಕ್ತರೇ ನಿಮಗೆ ಗೊತ್ತಿರಲಿ ನಾನು ಭಾರತದ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಆದರೆ ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿಯನ್ನು ವಿರೋಧಿಸುತ್ತೇನೆ, ಸ್ವಾತಂತ್ರ್ಯವೇ ನಮ್ಮ ಪಕ್ಷ" ಎಂದಿದ್ದಾರೆ.
ನೆನ್ನೆ ಪಾಕಿಸ್ತಾನದ ವಿದೇಶಾಂಗ ಸಚಿವ ಖುರ್ಷಿದ್ ಮಹಮದ್ ಕಸೂರಿ ಅವರ ಪುಸ್ತಕ ಬಿಡುಗಡೆ ಕಾರ್ಕ್ರಮವನ್ನು ಆಯೋಜಿಸದ್ದಕ್ಕೆ ಪತ್ರಕರ್ತ ಸುಧೀಂದ್ರ ಕುಲರ್ಣಿ ಅವರ ಮುಖಕ್ಕೆ ಶಿವಸೇನಾ ಕಾರ್ಯಕರ್ತರು ಮಸಿ ಬಳಿದ ಹಿನ್ನಲೆಯಲ್ಲಿ ರಶ್ದಿ ಅವರ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ.
"ಈಗ ಭಾರತೀಯ ಜೀವನದಲ್ಲಿ ಘಾತುಕರ ಹಿಂಸೆ ಪಸರಿಸಿದೆ. ಇದು ಹೊಸದು" ಎಂದು ರಶ್ದಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಈ ಹಿಂದೆ ಇದೇ ಲೇಖಕರ ಕೃತಿ 'ಸಟಾನಿಕ್ ವರ್ಸಸ್' ಮುಸ್ಲಿಮರ ಭಾವನೆಯನ್ನು ಘಾಸಿಗೊಳಿಸುತ್ತದೆ ಎಂದು ಭಾರತದಲ್ಲಿ ಈ ಪುಸ್ತಕವನ್ನು ನಿಷೇಧಿಸಲಾಗಿತ್ತು. ಇವರು ಜೈಪುರ ಸಾಹಿತ್ಯ ಸಮ್ಮೇಳನಕ್ಕೆ ಬರದಂತೆ ಕೂಡ ತಡೆಯಲಾಗಿತ್ತು.
ಇದೇ ಸಂದರ್ಭದಲ್ಲಿ ಜನಪ್ರಿಯ ಲೇಖಕ ಚೇತನ್ ಭಗತ್, ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸುತ್ತಿರುವವರ ವಿರುದ್ಧ ಬರೆದ ಟ್ವೀಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚೇತನ್ ಭಗತ್ ಅವರಿಗೆ ಅಕಾಡೆಮಿ ಪ್ರಶಸ್ತಿ ಬಂದರೆ ರೇಶನ್ ಕಾರ್ಡ್ ಹಿಂದಿರುಗಿಸುವುದಾಗಿ ಒಬ್ಬರು ಚೇತನ್ ಭಗತ್ ಅವರನ್ನು ಲೇವಡಿ ಮಾಡಿರುವುದು ವೈರಲ್ ಆಗಿರುವುದು ಇಲ್ಲಿ ಕುತೂಹಲ.
ಇಲ್ಲಿಯವರೆಗೂ ಸುಮಾರು ೨೦ಕ್ಕೂ ಹೆಚ್ಚು ಲೇಖಕರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಪಂಜಾಬಿ ಲೇಖಕಿಯೊಬ್ಬರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿ ಪ್ರತಿಭಟಿಸಿದ್ದಾರೆ.
Advertisement