ಬೆಳಗಾವಿ: ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಕಾರು ಹಾಗೂ ಅವರ ಬೆಂಬಲಿಗರ ಕಾರುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಮಂಗಳವಾರ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರ್ಪಿಡಿ ಕ್ರಾಸ್ನ ಕೃಷ್ಣಮಠದ ಬಳಿ ಶ್ರೀಗಳು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ ಮೇಲೆ ಹಾಗೂ ಟೆಂಪೊ ಟ್ರಾವೆಲರ್ ಮೇಲೆ ಇಂದು ಬೆಳಗ್ಗೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ.
ಘಟನೆಯ ನಂತರ ಪೇಜಾವರ ಶ್ರೀಗಳು ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗಾವಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಿಡಿಗೇಡಿಗಳು ತಮ್ಮ ಕಾರಿಮ ಮೇಲೆ ಕಲ್ಲೆಸೆತದ ಬಗ್ಗೆ ಶ್ರೀಗಳು ಸಂಸದರಿಗೆ ಚರ್ಚಿಸಿದ್ದಾರೆ.
ಚರ್ಚೆಯ ಬಳಿಕ ಸುರೇಶ್ ಅಂಗಡಿ ಅವರು ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಆಪ್ತ ಸಲಹೆಗಾರ ಕೆಂಪಯ್ಯ ಅವರಿಗೆ ಕರೆ ಮಾಡಿ ಘಟನೆ ಕುರಿತು ವಿವರ ನೀಡಿದ್ದಾರೆ. ಅಲ್ಲದೆ ಶೀಘ್ರ ಆರೋಪಿಗಳನ್ನು ಬಂಧಿಸಿ, ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
Advertisement