ಮೈಸೂರು ದಸರಾ; ವೈಭವದ ಜಂಬೂಸವಾರಿ; ಲಕ್ಷಾಂತರ ಜನರಿಂದ ವೀಕ್ಷಣೆ

ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು...
ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು.

ಅರಮನೆ ಆವರಣದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ವೇದಿಕೆಗೆ ತೆರದ ಜೀಪ್ ನಲ್ಲಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ  ಮಾಡುವ ಮೂಲಕ ಜಂಬೂ ಸವಾರಿಗೆ ವಿದ್ಯುಕ್ತ ಚಾಲನೆ ನೀಡಿದರು. ಈ ವೇಳೆ ಮೈಸೂರು ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್, ಸಚಿವರಾದ ಎಚ್ ಎಸ್ ಮಹದೇವ ಪ್ರಸಾದ್ ಮತ್ತು  ಸಚಿವೆ ಉಮಾಶ್ರೀ ಅವರು ಜೊತೆಗಿದ್ದರು.

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ
ಇದಕ್ಕೂ ಮೊದಲು ಅಂಬಾವಿಲಾಸ ಅರಮನೆಯ ಉತ್ತರದಲ್ಲಿರುವ ಬಲರಾಮ ದ್ವಾರದಲ್ಲಿ ಇಂದು ಮಧ್ಯಾಹ್ನ 12.07ರಿಂದ 12.21ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು  ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಮಧ್ಯಾಹ್ನ 12.30ರಿಂದ ಆರಂಭವಾಗುವ ಮಕರ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಮತ್ತು ಮೈಸೂರು ಅರಸರ ಅಧಿದೇವತೆ ಶ್ರೀ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.

ಈ ವೇಳೆ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಸಹೋದ್ಯೋಗಿಗಳು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿ ಇನ್ನಿತರ ಗಣ್ಯರು ಅಪರೂಪದ ಕ್ಷಣಕ್ಕೆ  ಸಾಕ್ಷಿಯಾದರು. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತಿರುವ ಅರ್ಜುನ ನೇತೃತ್ವದ ಗಜಪಡೆ 5.5 ಕಿ.ಮೀ. ದೂರವನ್ನು ಕ್ರಮಿಸಿ ಬನ್ನಿಮಂಟಪ ತಲುಪಲಿದೆ. ಚಾಮುಂಡೇಶ್ವರಿ  ಮೂರ್ತಿಯನ್ನು ಇರಿಸಲಾಗುವ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಅರ್ಜುನನೊಂದಿಗೆ ಕುಮ್ಕಿ, ನಿಶಾನೆ ಹಾಗೂ ನೌಪತ್ ಆನೆಗಳು ಹೆಜ್ಜೆ ಹಾಕುತ್ತಿವೆ. ಅರಮನೆ ಉತ್ತರ ದ್ವಾರದಿಂದ  ಹೊರಡುವ ಮೆರವಣಿಗೆ ಚಾಮರಾಜೇಂದ್ರ ಒಡೆಯರ್ ವೃತ್ತ, ಕೆ.ಆರ್.ವೃತ್ತ ಮೂಲಕ ಹಾದು ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಬನ್ನಿಮಂಟಪ ಸೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com