ದಾವಣಗೆರೆ: ವಿಚಾರವಾದಿ ಸಾಹಿತಿ ಎಂ.ಎಂ. ಕಲಬುರ್ಗಿ ಅವರ ಹತ್ಯೆ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಸಾಂಸ್ಕೃತಿಕ ಹಿನ್ನೆಲೆಯ ವ್ಯಕ್ತಿ ಮೇಲೆ ಹಲ್ಲೆಯಾಗಿದೆ.
ದಾವಣಗೆರೆಯ ಯುವ ಲೇಖಕ, ವಿದ್ಯಾರ್ಥಿ ಹೋರಾಟಗಾರ ಉಚ್ಚಂಗಿ ಪ್ರಸಾದ್ ಮೇಲೆ ಬುಧವಾರ ತಡರಾತ್ರಿ ಗುಂಪೊಂದು ಚಾಕುವಿನಿಂದ ಇರಿದಿದೆ. ಮಾ.22 ರಂದು ತಮ್ಮ `ಒಡಲ ಕಿಚ್ಚು' ಕೃತಿಯನ್ನು ಕೆ.ಎಸ್.ಭಗವಾನ್ರಿಂದ ಬಿಡುಗಡೆಗೊಳಿಸಿದ್ದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಇದೇ ವೇಳೆ ಉಚ್ಚಂಗಿ ಪ್ರಸಾದ್ ಮೇಲಿನ ಹಲ್ಲೆಯನ್ನು `ದಿ ಇಂಡಿಯನ್ ರೈಟರ್ಸ್ ವೇದಿಕೆ' ಖಂಡಿಸಿದೆ. ಈ ವೇದಿಕೆಯಲ್ಲಿ ನಯನತಾರಾ ಸೆಹಗಲ್, ಕೆ. ಸಚ್ಚಿದಾನಂದನ್ ಮತ್ತು ರೋಮಿಲಾ ಥಾಪರ್ ಮುಂತಾದ ಹಿರಿಯ ಬರಹಗಾರರಿದ್ದಾರೆ. ಜಾತಿ ವ್ಯವಸ್ಥೆಯ ಬಗೆಗೆ ಧ್ವನಿ ಎತ್ತಿದ ಯುವ ದಲಿತ ಕವಿ ಉಚ್ಚಂಗಿ ಪ್ರಸಾದ್ ಮೇಲೆ ನಡೆಸಲಾದ ಹಲ್ಲೆಯನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ.
ಭಿನ್ನಾಭಿಪ್ರಾಯವನ್ನು ಹೀಗೆ ಹಲ್ಲೆಯ ಮೂಲಕ ವ್ಯಕ್ತಪಡಿಸುವುದೇ ಸರಿಯಾದರೆ ಭಾರತವನ್ನು ಒಂದು ಪ್ರಜಾಪ್ರಭುತ್ವ ಎಂದು ಕರೆಯಲು ಹೇಗೆ ಸಾಧ್ಯ ಎಂದು ವೇದಿಕೆ ಪ್ರಶ್ನಿಸಿದೆ. ಇತ್ತೀಚಿನ ಲೇಖಕರ ಪ್ರತಿಭಟನೆಗಳು ಮತ್ತು ಈ ವೇದಿಕೆಯ ರಚನೆಯು ಇಂಥ ವಿಭಿನ್ನ ಬಗೆಯ, ಯಾವುದೇ ಭಾಷೆಯ ಲೇಖಕರ ಧ್ವನಿಯನ್ನು ಹತ್ತಿಕ್ಕುವ ಎಲ್ಲ ಬಗೆಯ ಪ್ರಯತ್ನಗಳನ್ನು ವಿರೋಧಿಸಲು ಸೃಷ್ಟಿಯಾಗಿದೆ ಎಂದು ವಿವರಿಸಿದೆ. ಹಲ್ಲೆಯ ನಂತರವೂ, ಬರೆಯುವ ಪ್ರಕ್ರಿಯೆಯನ್ನು ಬಿಡುವುದಿಲ್ಲ ಎಂಬ ಪ್ರಸಾದ್ ನಿರ್ಧಾರವನ್ನು ಅದು ಶ್ಲಾಘಿಸಿದೆ.
Advertisement