ನವದೆಹಲಿ: ಸ್ವಯಂ ನಿವೃತ್ತಿ (ವಿಆರ್ ಎಸ್) ಪಡೆದ ಯೋಧರಿಗೂ ಏಕ ಶ್ರೇಣಿ, ಏಕ ಪಿಂಚಣಿ ಅನ್ವಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭರವಸೆ ಕೊಟ್ಟ ಹಿನ್ನಲೆಯಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹಿರಿಯ ನಿವೃತ್ತ ಯೋಧರು ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಅವರು ನಮ್ಮ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.
ಏಕ ಶ್ರೇಣಿ ಏಕ ಪಿಂಚಣಿ (ಒಆರ್ ಒಪಿ) ಯೋಜನೆ ಘೋಷಣೆಯಾಗುವವರೆಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಣ ತೊಟ್ಟು, ಮಾಜಿ ಯೋಧರು ಸತ್ಯಾಗ್ರಹ ಆರಂಭಿಸಿದ್ದರು. ಇದೀಗ ಪ್ರಧಾನಿ ಭರವಸೆ ಹಿನ್ನೆಲೆಯಲ್ಲಿ ನಿವೃತ್ತ ಕರ್ನಲ್ ಪುಷ್ಪೇಂದರ್ ಸಿಂಗ್ ಹಾಗೂ 13 ಮಂದಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ, ತಂಪು ಪಾನೀಯ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರೀಕರ್ ಘೋಷಿಸಿದ್ದರು. ನಿವೃತ್ತ ಯೋಧರ ಪ್ರತಿಭಟನೆಗೆ ಮಣಿದಿದ್ದ ಕೇಂದ್ರ ಸರ್ಕಾರ ಕೊನೆಗೂ ಯೋಜನೆ ಘೋಷಿಸಿದ್ದು, ಸಂತಸ ತಂದಿರುವುದಾಗಿ ಹೇಳಿದ ನಿವೃತ್ತ ಯೋಧರು, ಇದು ನಮಗೆ ಪೂರ್ಣ ಸಮಾಧಾನ ತಂದಿಲ್ಲ. ಕೆಲವೇ ಬೇಡಿಕೆ ಈಡೇರಿಸಿದ್ದು, ಸಂಪೂರ್ಣ ಬೇಡಿಕೆ ಈಡೇರಿಕೆಯಾಗುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದ್ದರು.
Advertisement