ಕೆಎಎಸ್ ಪ್ರಶ್ನೆ ಪತ್ರಿಕೆ ಬಹಿರಂಗ: ಮುಂದಿನ ಪರೀಕ್ಷೆಗೆ ಬೇರೆ ಪ್ರಶ್ನೆ ಪತ್ರಿಕೆ; ಮೀನಾ ಸ್ಪಷ್ಟನೆ

ಕೆಎಎಸ್ ಮುಖ್ಯ ಪರೀಕ್ಷೆಯ ಮುಂದಿನ ಪ್ರಶ್ನೆ ಪತ್ರಿಕೆಗೆಳು ಬಹಿರಂಗವಾಗಿರುವುದನ್ನು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ...
ಕೆಪಿಎಸ್ ಸಿ
ಕೆಪಿಎಸ್ ಸಿ

ಬೆಂಗಳೂರು: ಕೆಎಎಸ್ ಮುಖ್ಯ ಪರೀಕ್ಷೆಯ ಮುಂದಿನ ಪ್ರಶ್ನೆ ಪತ್ರಿಕೆಗೆಳು ಬಹಿರಂಗವಾಗಿರುವುದನ್ನು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರು ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮೀನಾ ಅವರು, ಮೇಲ್ವಿಚಾರಕರ ಅಜಾಗುರುಕತೆಯಿಂದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಇಂದು ಪ್ರಬಂಧ ವಿಷಯದ ಪರೀಕ್ಷೆ ವೇಳೆ ಮುಂದೆ ನಡೆಯಬೇಕಾದ ನೀತಿ ಶಾಸ್ತ್ರ, ಸಾರ್ವಜನಿಕ ಆಡಳಿತ ಹಾಗೂ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳು ಸಹ ವಿತರಣೆಯಾಗಿವೆ. ಆದರೆ ಈಗ ವಿತರಣೆಯಾಗಿರುವ ಪ್ರಶ್ನೆ ಪತ್ರಿಕೆಗಳನ್ನು ಮತ್ತೆ ವಿತರಿಸುವುದಿಲ್ಲ. ಬದಲಾಗಿ ಬೇರೆ ಪ್ರಶ್ನೆ ಪತ್ರಿಕೆಗಳು ಸಿದ್ಧವಿದ್ದು, ಅವುಗಳನ್ನು ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಬಹಿರಂಗವಾಗಿರುವ ಪ್ರಶ್ನೆ ಪತ್ರಿಕೆಯನ್ನು ಯಾವುದೇ ಕಾರಣಕ್ಕೂ ಮತ್ತೆ ಬಳಸುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಆತಂಕಪಡುವ ಅಗತ್ಯ ಇಲ್ಲ ಎಂದು ಮೀನಾ ಹೇಳಿದ್ದಾರೆ.

ಗೆಜೆಟೆಡ್ ಪ್ರೊಬೆಷನರ್ಸ್‌ ಗ್ರೂಪ್ 'ಎ' ಹಾಗೂ ಗ್ರೂಪ್ 'ಬಿ' ಶ್ರೇಣಿಯ 465 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿ ಸೆಪ್ಟೆಂಬರ್ 18ರಿಂದ ಮುಖ್ಯ ಪರೀಕ್ಷೆ ನಡೆಯುತ್ತಿದ್ದು, ಹಲವು ಕೇಂದ್ರಗಳಲ್ಲಿ ಇಂದು ಪ್ರಬಂಧ ವಿಷಯ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ನಾಳೆ ನಡೆಯಬೇಕಿದ್ದ ಸಾಮಾನ್ಯ ಅಧ್ಯಯನ, ನೀತಿ ಶಾಸ್ತ್ರ ಹಾಗೂ ಸಾರ್ವಜನಿಕ ಆಡಳಿತ ವಿಷಯದ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಮೇಲ್ವಿಚಾರಕರು ಮತ್ತೆ ಪ್ರಬಂಧ ವಿಷಯದ ಪ್ರಶ್ನೆ ಪತ್ರಿಕೆ ನೀಡಿದ್ದಾರೆ. ಆದರೆ ನಾಳಿನ ಪ್ರಶ್ನೆ ಪತ್ರಿಕೆ ಇಂದೇ ಲಭ್ಯವಾಗಿರುವುದರಿಂದ ಪ್ರಶ್ನೆ ಪತ್ರಿಕೆ ಮೊದಲೇ ಲೀಕ್ ಆಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com