ಗಜಿಯಾಬಾದ್: ದೆಹಲಿ ಮೂಲದ ಉದ್ದಿಮೆದಾರನ ಕೊಲೆಯ ಪ್ರಕರಣವನ್ನು ಭೇದಿಸಿರುವುದಾಗಿ ಶನಿವಾರ ತಿಳಿಸಿರುವ ದೆಹಲಿ ಪೊಲೀಸರು, ಉದ್ದಿಮೆದಾರನ ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿರಿದ್ದಾರೆ. ಆ ಪ್ರಿಯಕರ ಮೃತ ಉದ್ದಿಮೆದಾರನ ದಾಯಾದಿ ಎಂದು ತಿಳಿದುಬಂದಿದೆ.
ತನ್ನ ಆಡಿ ಕಾರಿನಲ್ಲಿ ಪತ್ನಿ ಶಾಲಿನಿ (೩೮), ದಾಯಾದಿ ವಿಪುಲ್ (೩೬) ಇವರುಗಳೊಂದಿಗೆ ಹರಿದ್ವಾರಕ್ಕೆ, ರಿಯಲ್ ಎಸ್ಟೇಟ್ ಉದ್ದಿಮೆದಾರ ಮನ್ನು ವಾಲಿಯಾ (೪೦) ತೆರಳುತ್ತಿದ್ದಾಗ, ಮೋಟಾರ್ ಸೈಕಲ್ ನಲ್ಲಿ ಬಂದ ದಾಳಿಕೋರರು ಬುಧವಾರ ಗುಂಡು ಹಾರಿಸಿ ಕೊಂದಿದ್ದರು.
ಗುರುವಾರ ಸಂತ್ರಸ್ತನ ಕಿರಿಯ ಸಹೋದರ ಅಲೋಕ್ ಸಿಂಗ್ ಗಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿ, ಶಾಲಿನಿ ಮತ್ತು ವಿಪುಲ್ ಈ ಕೊಲೆಯ ಹಿಂದಿದ್ದಾರೆ ಎಂದು ದೂರಿದ್ದರು.
ಈ ಘಟನೆ ರಾಜ್ ನಗರ ಎಕ್ಸ್ಟೆಂಶನ್ ಪ್ರದೇಶದಲ್ಲಿ ನಡೆದಿತ್ತು.
ದೆಹಲಿ ಮತ್ತು ಇತರ ನಗರಗಳಲ್ಲಿ ಮನ್ನು ವಾಲಿಯಾ ಅವರ ಆಸ್ತಿಯನ್ನು ಕಬಳಿಸಲು ಹಾಗೂ ಶಾಲಿನಿ ಮತ್ತು ವಿಪುಲ್ ನಡುವೆ ಇದ್ದ ಅಕ್ರಮ ಸಂಬಂಧ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
"ವಿಚಾರಣೆ ವೇಳೆಯಲ್ಲಿ ವಿಪುಲ್ ತಪ್ಪು ಒಪ್ಪಿಕೊಂಡಿದ್ದಾನೆ. ಇಬ್ಬರೂ ಆಪಾದಿತರನ್ನು ಬಂಧಿಸಲಾಗಿದೆ ಹಾಗೂ ಗುಂಡು ಹಾರಿಸಿದ ಗುತ್ತಿಗೆ ಕೊಲೆಗಾರರನ್ನು ಬಂಧಿಸಲು ಪ್ರಯತ್ನ ನಡೆಯುತ್ತಿದೆ" ಎಂದು ಪೊಲೀಸ್ ಮಹಾ ಆಯುಕ್ತ ಅಜಯ್ ಪಾಲ್ ತಿಳಿಸಿದ್ದಾರೆ.
ಕಾರು ಚಾಲನೆ ಮಾಡುತ್ತಿದ್ದ ವಿಪುಲ್, ಹಾಗು ಸಂತ್ರಸ್ತನ ಪಕ್ಕಕ್ಕೆ ಕುಳಿತಿದ್ದ ಶಾಲಿನಿ ಅವರಿಗೆ ಯಾವುದೇ ಗಾಯಗಳಾಗದಿದ್ದರಿಂದ ನಮಗೆ ಸಂದೇಹ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗುತ್ತಿಗೆ ಕೊಲೆಗಾರರನ್ನು ಐದು ಲಕ್ಷ ಮೊತ್ತಕ್ಕೆ ಒಪ್ಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Advertisement