ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಲೋಕಾಯುಕ್ತ ಪಿಆರ್ಒ ಆಗಿದ್ದ ಸೈಯ್ಯದ್ ರಿಯಾಜ್, ಅಶ್ವಿನ್ ರಾವ್ನನ್ನು ತರಾಟೆಗೆ ತೆಗೆದುಕೊಂಡು ಬೈದಿದ್ದಾರೆಂದು ಜೈಲಿನ ಮೂಲಗಳಿಂದ ತಿಳಿದು ಬಂದಿದೆ.
ಶುಕ್ರವಾರ ಮಧ್ಯಾಹ್ನ ಬಕ್ರೀದ್ ಹಬ್ಬದ ಪ್ರಾರ್ಥನೆ ಹಿನ್ನೆಲೆಯಲ್ಲಿ ಮುಸ್ಲಿಂ ಕೈದಿಗಳು ನಮಾಜ್ ಮಾಡಿದ್ದು, ರಿಯಾಜ್ ಕೂಡ ನಮಾಜ್ ಮಾಡಿ ತಮ್ಮ ಸೆಲ್ನತ್ತ ಧಾವಿಸುತ್ತಿದ್ದರು. ಇದಕ್ಕೂ ಮೊದಲು ರಿಯಾಜ್ ಅವರನ್ನು ಭೇಟಿ ಮಾಡಲು ಬಂದಿದ್ದ ಸಂಬಂಧಿಗಳು ರಿಯಾಜ್ ಸಹೋದರಿ ಮಗಳ ಮದುವೆ ಫಿಕ್ಸ್ ಆಗಿರುವ ವಿಚಾರವನ್ನು ತಿಳಿಸಿದ್ದಾರೆ. ಇದರಿಂದ ಭಾವುಕರಾದ ರಿಯಾಜ್, ಕುಟುಂಬ ಸದಸ್ಯರಿಂದ ದೂರವಾದನೆಲ್ಲಾ ಎಂದು ಕೊರಗಿಕೊಂಡು ತಮ್ಮ ಸೆಲ್ ಕಡೆ ನಡೆದುಕೊಂಡು ಹೋಗುತ್ತಿದ್ದರು.
ತಮ್ಮ ಸೆಲ್ಗೆ ಹೋಗುವುದಕ್ಕೆ ಮುನ್ನವೇ ಇರುವ ಅಶ್ವಿನ್ ರಾವ್ ವಿಐಪಿ ಸೆಲ್ ಬಳಿ ತೆರಳಿದ ರಿಯಾಜ್, ಅಶ್ವಿನ್ರನ್ನು ಕರೆದು ರೇಗಾಡಿದ್ದಾರೆ. ಎಲ್ಲಾ ನಿನ್ನೆಂದಲೇ ಆಗಿದ್ದು. ಸಾಹೇಬರ ಮಗ ಎಂದು ಸಹಾಯ ಮಾಡಿದೆ. ಆದರೆ, ನೀನು ನನ್ನ ಮನೆಯನ್ನೇ ಹಾಳು ಮಾಡಿದೆ ಎಂದು ಜೋರಾಗಿ ಕೂಗಿದ್ದಾರೆಂದು ತಿಳಿದು ಬಂದಿದೆ.
ರಿಯಾಜ್ ಕಿರುಚಾಟ ಕೇಳಿಸಿಕೊಂಡರೂ ಅಶ್ವಿನ್ ರಾವ್ ಮರು ಮಾತನಾಡದೇ ಸುಮ್ಮನಿದ್ದರು. ಇದರಿಂದ ಕೆರಳಿದ ರಿಯಾಜ್, ಅಶ್ವಿನ್ ತಲೆಗೆ ಎರಡು ಬಾರಿ ಗುದ್ದಿದರಂತೆ. ಇದರಿಂದ ಅಶ್ವಿನ್ ಕಿರುಚಾಡಿದ ಹಿನ್ನೆಲೆಯಲ್ಲಿ ಜೈಲಿನ ಸಿಬ್ಬಂದಿ ಆಗಮಿಸಿ ರಿಯಾಜ್ ಅವರನ್ನು ಅವರ ಸೆಲ್ಗೆ ಕರೆದೊಯ್ದಿದ್ದಾರೆಂದು ಜೈಲಿನ ಮೂಲಗಳು ತಿಳಿಸಿವೆ.
Advertisement