ರಾಂಚಿ: ನಾಲ್ಕು ದಿನಗಳ ಹಿಂದೆ ದೇವಾಲಯವೊಂದರ ಆವರಣದಲ್ಲಿ ದನದ ಮಾಂಸ ಕಂಡು ಬಂದ ಹಿನ್ನಲೆಯಲ್ಲಿ ಉಂಟಾದ ಕೋಮು ಘರ್ಷಣೆಗಳಿಂದ ರಾಂಚಿ ಇನ್ನೂ ಉದ್ವಿಗ್ನಗೊಂಡಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಮತ್ತು ಅಧಿಕಾರಿಗಳು ಕಣ್ಗಾವಲನ್ನು ಹೆಚ್ಚಿಸಿದ್ದಾರೆ.
ಸೋಮವಾರ ಮಧ್ಯರಾತ್ರಿಯ ನಂತರ ಒಂದು ಕೋಮಿನ ಜನ ಚೂಪಾದ ಆಯುಧಗಳನ್ನು ಬಳಸಿ ಮತ್ತೊಂದು ಕೋಮಿನ ಜನರ ಮೇಲೆ ದಾಳಿ ಮಾಡಿರುವುದಲ್ಲದೆ, ಡೊರಾಂದ ಪ್ರದೇಶದಲ್ಲಿ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಜನರ ಓಡಾಟಕ್ಕೆ ಅಧಿಕಾರಿಗಳು ನಿಯಂತ್ರಣ ಹೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನಾಲ್ಕು ಜನರನ್ನು ಈಗಾಗಲೇ ಬಂದಿಸಿದ್ದು ಇನ್ನೂ ಹೆಚ್ಚಿನ ಜನರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಮಳಿಗೆಗಳು ಮುಚ್ಚಿದ್ದವು.
ಪೊಲೀಸರ ಪ್ರಕಾರ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದರೂ ಇನ್ನು ಉದ್ವಿಗ್ನತೆ ಇದೆ.
ಶಾಂತಿ ಸೌಹಾರ್ದತೆ ಕಾಪಾಡಲು ರಾಜ್ಯಸರ್ಕಾರ ಪ್ರಾದೇಶಿಕ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
Advertisement