ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರು ಸಹಕಾರಿ ಸಂಘ ಹಾಗೂ ಬ್ಯಾಂಕ್ಗಳಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಬುಧವಾರ ರಾಜ್ಯ ಸರ್ಕಾರ ಘೋಷಿಸಿದೆ.
ರೈತರ ಈ ವರ್ಷದ ಸಾಲದ ಕಂತಿನ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ವಿಧಾಸೌಧದಲ್ಲಿ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್. ಮಹಾದೇವ್ ಪ್ರಸಾದ್ ಅವರು ತಿಳಿಸಿದ್ದಾರೆ.
ರೈತರು ಪಡೆದಿರುವ ಮಧ್ಯಮ ಮತ್ತು ಧೀರ್ಘಾವಧಿಯ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಮತ್ತು ಈ ವರ್ಷದ ಸಾಲದ ಕಂತನ್ನೂ ಸಹ ಕಟ್ಟಬೇಕಾಗಿಲ್ಲ. ಸಾಲದ ಕಂತಿನ ಪಾವತಿ ಒಂದು ವರ್ಷ ಮುಂದೂಡುವುದಾಗಿ ಮಹದೇವ್ ಪ್ರಸಾದ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದ್ದು, ರೈತರ ಒಂದು ವರ್ಷದ ಸಾಲದ ಮೇಲಿನ 296.52 ಕೋಟಿ ರುಪಾಯಿ ಬಡ್ಡಿಯನ್ನು ಸರ್ಕಾರವೇ ಭರ್ತಿ ಮಾಡಲಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡುವುದು ಬೇಡ ಎಂದು ಸಹಕಾರ ಸಂಘ ಹಾಗೂ ಬ್ಯಾಂಕ್ಗಳಿಗೆ ಸಚಿವರು ಸೂಚಿಸಿದರು.
ರಾಜ್ಯದ ಬರ ಪರಿಸ್ಥಿತಿ ಹಾಗೂ ಮುಂದುವರಿದ ರೈತರ ಆತ್ಮಹತ್ಯೆ ಪ್ರಕರಣಗಳಿಂದಾಗಿ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಆಡಳಿತಾರೂಢ ಕಾಂಗ್ರೆಸ್ ರೈತರಿಗೆ ನೆರವಾಗುವ ದೃಷ್ಟಿಯಿಂದ ಸಾಲದ ಮೇಲಿನ ಒಂದು ವರ್ಷದ ಬಡ್ಡಿ ಮನ್ನಾ ಮಾಡಿದೆ.
Advertisement