ಸಿಯಾಚಿನ್‌ನಲ್ಲಿರುವ ಸೈನಿಕರ ಸಹಾಯಕ್ಕೆ ಇಸ್ರೋ

ಸಿಯಾಚಿನ್‌ನಲ್ಲಿ ದೇಶ ಕಾಯುವ ಭಾರತದ ಸೈನಿಕರು ಪಾಕಿಸ್ತಾನದ ಸೈನಿಕರ ಗುಂಡಿಗೆ ಬಲಿಯಾಗುವುದಕ್ಕಿಂತ ಹೆಚ್ಚು ಅಲ್ಲಿ ಹಮಾಮಾನ ವೈಪರೀತ್ಯಕ್ಕೆ...
ಸಿಯಾಚಿನ್‌
ಸಿಯಾಚಿನ್‌
ತಿರುವನಂತಪುರಂ: ಸಿಯಾಚಿನ್‌ನಲ್ಲಿ ದೇಶ ಕಾಯುವ ಭಾರತದ ಸೈನಿಕರು  ಪಾಕಿಸ್ತಾನದ ಸೈನಿಕರ ಗುಂಡಿಗೆ ಬಲಿಯಾಗುವುದಕ್ಕಿಂತ ಹೆಚ್ಚು ಅಲ್ಲಿ ಹಮಾಮಾನ ವೈಪರೀತ್ಯಕ್ಕೆ ಬಲಿಯಾಗುತ್ತಾರೆ. ಸಿಯಾಚಿನ್ ನೀರ್ಗಲ್ಲಿನ ಕೊರೆಯುವ ಚಳಿ ಅಲ್ಲಿ ಕಾರ್ಯ ನಿರತರಾಗಿರುವ ಸೈನಿಕರ ಪ್ರಾಣ ಅಪಹರಿಸುತ್ತಿದೆ. ಇಂತಿರ್ಪ, ಈ ರೀತಿ ಸೈನಿಕರ ಜೀವ ಬಲಿಯಾಗುವುದನ್ನು ತಡೆಯಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಸಾಧ್ಯ!. ಅದು ಹೇಗೆ ಗೊತ್ತಾ?
ಸೈನಿಕರು ನಾಪತ್ತೆಯಾದರೆ ಅವರನ್ನು ಹುಡುಕಲು ಸಾಧ್ಯವಾಗುವಂತೆ ಸಂದೇಹವನ್ನು ನೀಡುವ ತಂತ್ರಜ್ಞಾನ ಹೊಂದಿರುವ ರಕ್ಷಣಾ ಕವಚವೊಂದನ್ನು ಇಸ್ರೋ ಸಿದ್ಧಪಡಿಸಿದ್ದು, ಇದು ಭಾರತೀಯ ಸೈನಿಕರ ರಕ್ಷಣೆಗೆ ಸಹಾಯ ಮಾಡಲಿದೆ.
ರಕ್ಷಣಾ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ  ಕಳೆದ ಮೂರು ವರ್ಷಗಳ ಅವಧಿಯಲ್ಲಿ 41 ಸೈನಿಕರು ಸಿಯಾಚಿನ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 1984ರಲ್ಲಿ ಭಾರತ ಸಿಯಾಚಿನ್‌ನನ್ನು ವಶಕ್ಕೆ ತೆಗೆದುಕೊಂಡಾಗ ಅಲ್ಲಿನ ಹಿಮಪಾತದಲ್ಲಿ 1,000 ಸೈನಿತರು ಸಾವಿಗೀಡಾಗಿದ್ದರು. 220 ಸಾವಿರ ಸೈನಿಕರು ಶತ್ರುಗಳ ಗುಂಡಿಗೆ ಬಲಿಯಾಗಿದ್ದರು. ಅಂದರೆ  6000-7000 ಮೀಟರ್ ಎತ್ತರದಲ್ಲಿರುವ ಈ ಹಿಮಚ್ಛಾದಿತ ಪ್ರದೇಶದಲ್ಲಿ ಹವಾಮಾನವೇ ದೊಡ್ಡ ಹಂತಕನಾಗಿ ಪರಿಣಿಸಿದೆ.
ಭಾರತದ ಲ್ಯಾಬ್‌ಗಳಲ್ಲಿ ಹೊಸ ತಂತ್ರಜ್ಞಾನದ ಸಹಾಯವೂ ನಮ್ಮ ಸೈನಿಕರಿಗೆ ಸಿಕ್ಕಿದರೆ ಅವರ ಪ್ರಾಣವೂ ಉಳಿಯಲು ಸಹಾಯಕವಾಗುತ್ತದೆ. ಆದರೆ ವಿಜ್ಞಾನಿಗಳೂ ಇಂಥಾ ತಂತ್ರಜ್ಞಾನವನ್ನು ಬಳಸಲು ನಿರುತ್ಸಾಹ ತೋರಿಸಿದರೆ, ಇನ್ನೊಂದೆಡೆ ತಯಾರಿಕಾ ಕಂಪನಿಗಳು ಕೂಡಾ ಈ ಒಲವು ತೋರಿಸುವುದಿಲ್ಲ ಎಂಬುದು ಸತ್ಯ.
ಈಗಲೂ ಭಾರತೀಯ ಸೈನಿಕರು ತುಂಬಾ ಭಾರವಾದ ಬಟ್ಟೆಗಳನ್ನೇ ಧರಿಸುತ್ತಿದ್ದಾರೆ. ಇದನ್ನು ಮನಗಂಡು ಇಸ್ರೋ ಇವರಿಗೆ ಹಗುರವಾದ ಮತ್ತು ತಂತ್ರಜ್ಞಾನವನ್ನು ಅಳವಡಿಸಿದ ಬಟ್ಟೆಯನ್ನು ತಯಾರಿಸಲು ಮುಂದಾಗಿದೆ. ಇಂಥಾ ಬಟ್ಟೆಗಳಲ್ಲಿ ರೇಡಿಯೋ ಸಿಗ್ನಲ್ ಎಮಿಟರ್‌ಗಳನ್ನು ಬಳಸಲಾಗುತ್ತಿತ್ತು ಇವು ನಾಪತ್ತೆಯಾದ ಸೈನಿಕರನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ. ಒಂದು ವೇಳೆ ಹಿಮಪಾತದಲ್ಲಿ ಸೈನಿಕ ನಾಪತ್ತೆಯಾಗಿದ್ದರೆ, ಈ ರೇಡಿಯೋ ಸಿಗ್ನಲ್‌ಗಳ ಮೂಲಕ ಸೈನಿಕ ಇರುವ ಜಾಗವನ್ನು ಸರಿಯಾಗಿ ಪತ್ತೆ ಹಚ್ಚಬಹುದಾಗಿದೆ. 
ಒಂದಷ್ಟು ಶ್ರಮವಹಿಸಿದರೆ ಹೈಟೆಕ್ ಸ್ಪೇಸ್ ಅಪ್ಲಿಕೇಷನ್‌ಗಳನ್ನು ಮತ್ತು ಹೊಸ ತಂತ್ರಜ್ಞಾನಗಳನ್ನು ನಾವೇ ಸಿದ್ಧಪಡಿಸಬಹುದಾಗಿದೆ ಎಂದು ತಿರುವನಂತಪುರಂನಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ವಿಜ್ಞಾನಿ ಮತ್ತು ನಿರ್ದೇಶಕ ಕೆ. ಶಿವನ್ ಹೇಳಿದ್ದಾರೆ.
ಇಂಥಾ ರಕ್ಷಣಾ ತಂತ್ರಜ್ಞಾನಗಳನ್ನು ಬಳಸಿದ್ದರೆ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸೇರಿದಂತೆ ಇನ್ನಿತರ 9 ಯೋಧರನ್ನು ಅಂದು ಸಿಯಾಚಿನ್‌ನಲ್ಲಿ ಬದುಕಿಸಬಹುದಿತ್ತು. ಸಿಲಿಕಾ ಏರೋಜೆಲ್‌ನಿಂದ ತಯಾರಿಸಲ್ಪಟ್ಟ ವಸ್ತ್ರಗಳನ್ನು ಇವರು ಧರಿಸಿದ್ದರೆ ಆ ಚಳಿಯಿಂದ ಅವರು ಬಚಾವ್ ಆಗುತ್ತಿದ್ದರು.
ಏನಿದು ಸಿಲಿಕಾ ಏರೋಜೆಲ್?
ಏರೋಜೆಲ್ ಘನ ಸ್ವರೂಪದಲ್ಲಿದ್ದರೂ ಅದು ಶೇ.99 ರಷ್ಟು ಗಾಳಿಯಿಂದ ತುಂಬಿಕೊಂಡಿರುತ್ತದೆ. ಇವುಗಳು ಹಗರುವಾಗಿದ್ದು, ದೇಹದ ಉಷ್ಣತೆಯನ್ನು ಕಾಪಾಡುತ್ತದೆ.
ರಾಕೆಟ್‌ನ ಕ್ರಿಯೋಜೆನಿಕ್ ಇಂಜಿನ್‌ನಲ್ಲಿ  ಲಿಕ್ವಿಡ್ ಹೈಡ್ರೋಜನ್ ಮತ್ತು ಲಿಕ್ವಿಡ್  ಆಕ್ಸಿಜನ್‌ನ್ನು ಹಿಡಿದಿರಿಸುವುದಕ್ಕಾಗಿ ಸಿಲಿಕಾ ಏರೇಜೆಲ್‌ನಿಂದ ಮಾಡಿದ ಟ್ಯಾಂಕ್ ಬಳಸಲಾಗುತ್ತದೆ. ಇದು ಹಗುರವಾಗಿರುವುದರಿಂದ ಇದನ್ನು ಬಾಹ್ಯಾಕಾಶ ಯಾತ್ರಿಗಳ ವಸ್ತ್ರವಾಗಿಯೂ ಬಳಸಬಹುದಾಗಿದೆ. 2018ರಲ್ಲಿ  ನಡೆಯಲಿರುವ ಚಂದ್ರಯಾನ-2 ನ ಅಂಗವಾಗಿ ಪುಟ್ಟದೊಂದು ವಾಹನವನ್ನು ತಯಾರಿಸಿದ್ದು ಇದೇ ಸಿಲಿಕಾ ಏರೋಜೆಲ್ ನಿಂದಾಗಿದೆ. 
ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ಈಗಾಗಲೇ ಸಿಲಿಕಾ ಏರೋಜೆಲ್ ನಿಂದ ತಯಾರಿಸಲ್ಪಟ್ಟ ಬಟ್ಟೆಯೊಂದನ್ನು ನಿರ್ಮಿಸಿದ್ದು, ಅದನ್ನು ಇನ್ನಷ್ಟು ಉತ್ತಮ ಪಡಿಸಬೇಕಾಗಿದೆ.
ಅದೇ ವೇಳೆ ಇಸ್ರೋ ವಿಜ್ಞಾನಿಗಳು ಪುಟ್ಟದಾದ ಪೊರ್ಟೆಬಲ್ ಡಿವೈಸ್‌ವೊಂದನ್ನು ತಯಾರಿಸಿದ್ದು, ಇದು ನಾಪತ್ತೆಯಾದವರನ್ನು ಹುಡುಕಲು ಮತ್ತು ಮತ್ತು ಅವರನ್ನು ರಕ್ಷಿಸಲು ಸಹಾಯ ಮಾಡುತ್ತಿದೆ. ಬಟನ್ ಅದುಮಿದರೆ ಆಕ್ಟಿವೇಟ್ ಆಗುವ ಈ ಡಿವೈಸ್ ರೇಡಿಯೋ ಕಿರಣಗಳನ್ನು ಹೊರಸೂಸುತ್ತದೆ. ಈ ರೇಡಿಯೋ ಕಿರಣಗಳನ್ನು ಉಪಗ್ರಹಗಳ ಮೂಲಕ ಪತ್ತೆ ಹಚ್ಚಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com