ಧಾರವಾಡ: ದಶಕಗಳ ಕನ್ನಡಿಗರ ಕನಸು ನನಸಾಗಿದ್ದು, ಪ್ರತಿಷ್ಠಿತ ಧಾರವಾಡ ಐಐಟಿ ಸಂಸ್ಥೆಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.
ಧಾರವಾಡ ನಗರದ ಹೊರವಲಯದಲ್ಲಿ ಮಾಡಲಾಗಿರುವ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ ಜಾವಡೇಕರ್ ಅವರು ಐಐಟಿಯನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್ ವಿ ದೇಶಪಾಂಡೆ, ಹೆಚ್ ಕೆ ಪಾಟೀಲ್, ಸಂತೋಷ್ ಲಾಡ್, ಮಾಜಿ ಮುಖ್ಯಮಂತ್ರಿ, ವಿಧಾನ ಸಭೆ ಪ್ರತಿ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಮತ್ತಿತರರು ಹಾಜರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮುಂಬೈ ಐಐಟಿಯಿಂದ ಆಗಮಿಸಿದ್ದ ತಜ್ಞರು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಸಂಬಂಧಿತ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡಿದರು. ಬಳಿಕ ಐಐಟಿ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಐಐಟಿ ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು.
ಕಳೆದ ತಿಂಗಳೇ ಐಐಟಿ ಉದ್ಘಾಟನೆಗೆ ನಿರ್ಧರಿಸಲಾಗಿತ್ತಾದರೂ ಕಳಸಾ ಬಂಡೂರಿ ನಾಲಾ ಪ್ರತಿಭಟನೆ ಹಿನ್ನಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಕಾರ್ಯಕ್ರಮಕ್ಕೆ ಸುಮಾರು 2000 ಸಾವಿರ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿತ್ತು.
ಧಾರವಾಡದ ಹೊರವಲಯದ ತಾತ್ಕಾಲಿಕವಾಗಿ ನೀರು ಮತ್ತು ಭೂಮಿ ನಿರ್ವಹಣಾ ಸಂಸ್ಥೆ (ವಾಲ್ಮಿ)ಆವರಣದಲ್ಲಿ ಐಐಟಿ ಕಾರ್ಯ ನಿರ್ವಹಿಸಲಿದ್ದು, ಸಂಸ್ಥೆಯ ಶಾಶ್ವತ ಕ್ಯಾಂಪಸ್ ಶೀಘ್ರದಲ್ಲಿಯೇ ಕೆಲ್ಗೇರಿ ಪಟ್ಟಣದ ಸಮೀದಲ್ಲಿ ಸುಮಾರು 500 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ತಲೆ ಎತ್ತಲಿದೆ. ಈ ಸಂಸ್ಥೆಯನ್ನು ಮುಂಬೈ ಐಐಟಿ ಸಂಸ್ಥೆ ತಜ್ಞರು ಮೇಲ್ವಿಚಾರಣೆ ಮಾಡಲಿದ್ದಾರೆ.
Advertisement