ಗಂಗಾ ನದಿಯಲ್ಲಿ 10 ದಿನಗಳಲ್ಲಿ 550 ಕಿಮೀ ಈಜುತ್ತಿರುವ 11 ವರ್ಷದ ಬಾಲಕಿ!

'ಗಂಗಾ ಸ್ವಚ್ಛತೆ' ಸಂದೇಶ ಹೊತ್ತು, 11 ವರ್ಷದ ಬಾಲಕಿ 10 ದಿನಗಳಲ್ಲಿ ಗಂಗಾ ನದಿಯ ಕಾನ್ಪುರ ಮಸ್ಸಾಕರ್ ಘಾಟ್ ನಿಂದ ವಾರಣಾಸಿಯವರೆಗೆ 550 ಕಿ ಮೀ ಈಜುವ ಮಹತ್ವಾಕಾಂಕ್ಷೆಗೆ ಮುಂದಾಗಿದ್ದಾರೆ.
ಶ್ರದ್ಧಾ ಶುಕ್ಲಾ
ಶ್ರದ್ಧಾ ಶುಕ್ಲಾ
ಕಾನ್ಪುರ: 'ಗಂಗಾ ಸ್ವಚ್ಛತೆ' ಸಂದೇಶ ಹೊತ್ತು, 11 ವರ್ಷದ ಬಾಲಕಿ 10 ದಿನಗಳಲ್ಲಿ ಗಂಗಾ ನದಿಯ ಕಾನ್ಪುರ ಮಸ್ಸಾಕರ್ ಘಾಟ್ ನಿಂದ ವಾರಣಾಸಿಯವರೆಗೆ 550 ಕಿ ಮೀ ಈಜುವ ಮಹತ್ವಾಕಾಂಕ್ಷೆಗೆ ಮುಂದಾಗಿದ್ದಾರೆ.
ಮುಂದಿನ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸನ್ನು ಕೂಡ ಹೊತ್ತಿದ್ದಾರೆ 9 ನೇ ತರಗತಿಯ ವಿದ್ಯಾರ್ಥಿನಿ ಶ್ರದ್ಧಾ ಶುಕ್ಲಾ. ಹಾಗೆಯೇ 'ಕ್ಲೀನ್ ಗಂಗಾ' ಅಭಿಯಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಇದು ಎನ್ನುತ್ತಾರೆ. 
"ಅವಳು ಈಗಾಗಲೇ 150 ಕಿಮೀ ದೂರ ಈಜಿದ್ದಾಳೆ. ಆಗ ವಾರಣಾಸಿಯತ್ತ ತೆರಳಿದ್ದಾಳೆ" ಎಂದು ವೃತ್ತಿಪರ ಡೈವರ್, ಶ್ರದ್ಧಾಳ ತರಬೇತುದಾರ ಮತ್ತು ತಂದೆ ಲಲಿತ್ ಶುಕ್ಲಾ ಹೇಳಿದ್ದಾರೆ. 
"ಅವಳಿಗೆ ಎರಡು ವರ್ಷವಾದಾಗಿಲಿಂದಲೂ ತರಬೇತಿ ಪಡೆದಿದ್ದಾಳೆ" ಎಂದು ತಿಳಿಸುವ ಲಲಿತ್ ವರದಿಗಾರರೊಂದಿಗೆ ಮಾತನಾಡಿದ್ದಾರೆ. "ಅವಳು 9 ವರ್ಷದವಳಾಗಿದ್ದಾಗಲೇ 2014ರಲ್ಲಿ ಒಂದು ವಾರದಲ್ಲಿ ಕಾನ್ಪುರದಿಂದ ಅಲ್ಲಹಾಬಾದ್ ವರಗೆ ಈಜಿದ್ದಳು" ಎಂದು ಕೂಡ ತಿಳಿಸಿದ್ದಾರೆ. 
ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಕಾನ್ಪುರದ ಮಸಾಕರ್ ಘಾಟ್ ನಿಂದ ಶ್ರದ್ಧಾ ನೆನ್ನೆ ಸಂಜೆಯೇ ಈ ಸಾಹಸದಲ್ಲಿ ತೊಡಗಿದ್ದಾರೆ. ಅವರನ್ನು ಎಂಟು ಜನ ಡೈವರ್ ಗಳು, ಇಬ್ಬರು ಶೂಟರ್ ಗಳು ಮತ್ತು ಡಾಕ್ಟರ್ ತಂಡ ಹಾಗು ಒಂದು ಹಡಗು ಹಿಂಬಾಲಿಸುತ್ತಿದೆ. 
ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸುವ ಲಲಿತ್ ಕೆಲವು ಪ್ರದೇಶಗಳಲ್ಲಿ ಮೊಸಳೆಗಳಿಂದ ರಕ್ಷಿಸಲು ಮೀನಿನ ಬಲೆಯನ್ನು ಉಪಯೋಗಿಸಲಾಗಿದೆ ಹಾಗೆಯೇ ಅಪಾಯಕಾರಿ ಸನ್ನಿವೇಶದಿಂದ ರಕ್ಷಿಸಲು ಇಬ್ಬರು ಶೂಟರ್ ಗಳು ಜೊತೆಗಿದ್ದಾರೆ ಎಂದು ತಿಳಿಸುವ ಅವರು ಶ್ರದ್ಧಾ ದಿನಕ್ಕೆ ಏಳು ಘಂಟೆಗಳ ಕಾಲ ಈಜುತ್ತಾರೆ ಎಂದು ತಿಳಿಸಿದ್ದಾರೆ. 
"ಈ ಇಡೀ ಪ್ರಯಾಣವನ್ನು ವಿಡಿಯೋ ಚಿತ್ರೀಕರಣಗೊಳಿಸಲಾಗುತ್ತಿದ್ದು ಅದನ್ನು ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಈ ಬಾಲಕಿಯ ಪ್ರತಿಭೆ ಎಲ್ಲರಿಗು ತಿಳಿದು ಅವಳು ಒಲಂಪಿಕ್ಸ್ ಪ್ರತಿನಿಧಿಸುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ಅವಳಿಗೆ ಧನಸಹಾಯ ಸಿಗುವ ಭರವಸೆಯಿದೆ. 
"ಇದಕ್ಕಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಲಿದ್ದೇವೆ" ಎಂದು ಕೂಡ ಲಲಿತ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com