ಗಜಿಯಾಬಾದ್: ಗಜಿಯಾಬಾದ್ ನ ದೆಹಲಿ ಪಬ್ಲಿಕ್ ಶಾಲೆ ಮನಬಂದಂತೆ ಶುಲ್ಕ ಹೆಚ್ಚಿಸಿರುವುದರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದಕ್ಕೆ, ಶಾಲೆಯ ಆಡಳಿತ ಅವರ ಪುತ್ರಿ, ಏಳನೇ ತರಗತಿಯ ವಿದ್ಯಾರ್ಥಿಯನ್ನು ಉಚ್ಛಾಟಿಸಿದೆ ಎಂದು ತಂದೆ ಸೋಮವಾರ ದೂರಿದ್ದಾರೆ.
ಶುಕ್ರವಾರ ಅನನ್ಯ ಭಟ್ನಾಗರ್ ಅವರಿಗೆ ಟಿಸಿ ನೀಡಲಾಗಿದ್ದು ಶಾಲೆ ತೊರೆಯುವಂತೆ ಹೇಳಲಾಗಿದೆ.
ಶನಿವಾರ ಮತ್ತು ಭಾನುವಾರ ಶಾಲಾ ವ್ಯಸ್ಥಾಪಕ ಮಂಡಳಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಆದರೆ ಸೋಮವಾರ ಅನನ್ಯ ಶಾಲೆಗೆ ತೆರಳಿದಾಗ ಅವರನ್ನು ಪ್ರವೇಶ ದ್ವಾರದ ಬಳಿಯೇ ತಡೆಯಲಾಗಿದೆ.
ಪೋಷಕರ ಸಂಘ "ಅಭಿಭಾವಾಕ್ ಸಂಘದ" ಕಚೇರಿ ಸದಸ್ಯನೂ ಆಗಿರುವ ತಂದೆ ನೀರಜ್ ಭಟ್ನಾಗರ್ ಅವರನ್ನು ಭೇಟಿ ಮಾಡಲು ಶಾಲಾ ಪ್ರಾಂಶುಪಾಲರು ನಿರಾಕರಿಸಿದ್ದಾರೆ.
"ಮಂಗಳವಾರ ಒಗ್ಗಟ್ಟಿನಿಂದ ಶಾಲೆಯ ಕಾನೂನುಬಾಹಿರ ಕ್ರಮದ ವಿರುದ್ಧ ಪ್ರತಿಭಟಿಸಲಿದ್ದೇವೆ ಮತ್ತು ಶಾಲೆಯ ಸರ್ವಾಧಿಕಾರ ಧೋರಣೆಯ ವಿರುದ್ಧ ದೂರು ನೀಡಲಿದ್ದೇನೆ. ಇದು ಕಾನುಬಾಹಿರ ನಡೆ ಮತ್ತು ವಿದ್ಯಾರ್ಥಿನಿಯ ಜೀವನವನ್ನು ಹಾಳುಗೆಡವಲಿದೆ" ಎಂದು ನೀರಜ್ ಭಟ್ನಾಗರ್ ಹೇಳಿದ್ದಾರೆ.
ಶಾಲೆಯ ವಿರುದ್ಧ ಅರ್ಜಿ ಹಾಕುವ ಮೂಲಕ ಶಾಲೆಯ ಹೆಸರನ್ನು ಹಾಳುಗೆಡವಿದ್ದಾರೆ ಎಂದು ದೂರಿ ವಿದ್ಯಾರ್ಥಿನಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಶಾಲೆಯ ಆಡಳಿತ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.
"ಇತ್ತೀಚೆಗಷ್ಟೇ, ಶಾಲಾ ಶುಲ್ಕ ಕಟ್ಟಲಾಗದ್ದಕ್ಕೆ 9 ನೇ ತರಗತಿಯ ವಿದ್ಯಾರ್ಥಿನಿ ಪ್ರಿಯಾಂಶಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶಾಲೆಗಳ ಇಂತಹ ಧೋರಣೆ ಸಮಾಜಕ್ಕೆ ಮಾರಕ" ಎಂದು ಶಿಕ್ಷಣತಜ್ಞ ಪ್ರೊ. ಟಿ ಪಿ ಸಿಂಗ್ ಹೇಳಿದ್ದಾರೆ.