ವಿವಿಐಪಿ ಚಾಪರ್ ಹಗರಣ: ಮಧ್ಯವರ್ತಿ ಕ್ರಿಸ್ಟಿಯನ್ ಮೈಕೆಲ್ ವಿರುದ್ಧ ಜಾಮೀನು ರಹಿತ ವಾರೆಂಟ್!

ಮಹತ್ವದ ಬೆಳವಣಿಗೆಯೊಂದರಲ್ಲಿ ಬಹುಕೋಟ ವಿವಿಐಪಿ ಚಾಪರ್ ಖರೀದಿ ಹಗರಣ ಸಂಬಂಧ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ಇಂಗ್ಲೆಂಡ್ ಮೂಲದ ದಲ್ಲಾಳಿ ಕ್ರಿಸ್ಟಿಯನ್ ಮೈಕೆಲ್ ಜೇಮ್ಸ್ ಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಹುಕೋಟ ವಿವಿಐಪಿ ಚಾಪರ್ ಖರೀದಿ ಹಗರಣ ಸಂಬಂಧ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ಇಂಗ್ಲೆಂಡ್ ಮೂಲದ ದಲ್ಲಾಳಿ ಕ್ರಿಸ್ಟಿಯನ್ ಮೈಕೆಲ್ ಜೇಮ್ಸ್ ಗೆ  ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಪ್ರಕರಣ ಸಂಬಂಧ ನಿನ್ನೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ನ್ಯಾಯಪೀಠ ದಲ್ಲಾಳಿ ಕ್ರಿಸ್ಟಿಯನ್ ಮೈಕೆಲ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.  ಅಲ್ಲದೆ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಹಾಗೂ ಪ್ರಕರಣ ಸಂಬಂದ ಇತರೆ ಇಬ್ಬರಿಗೂ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ. ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ವಾದಮಂಡಿಸಿದ ವಕೀಲ ನವೀನ್  ಕುಮಾರ್ ಮಟ್ಟಾ ಅವರು, ಪ್ರಕರಣದ ವಿಚಾರಣೆ ಆರಂಭವಾದಾಗಿನಿಂದ ಈವೆರೆಗೂ ಕ್ರಿಸ್ಟಿಯನ್ ಮೈಕೆಲ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಬೇಕು ಎಂದು ತಮ್ಮ ವಾದ  ಮಂಡಿಸಿದರು. ವಕೀಲರ ವಾದಕ್ಕೆ ಮನ್ನಣೆ ನೀಡಿದ ನ್ಯಾಯಾಲಯ ಕ್ರಿಸ್ಟಿಯನ್ ಮೈಕೆಲ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಇದೇ ವೇಳೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಚಾರ್ಜ್ ಶೀಟ್ ಆಧರಿಸಿ ದೆಹಲಿ ನ್ಯಾಯಾಲಯ, ಹವಾಲಾ ಹಣ ನಿಯಂತ್ರಣಕಾಯ್ದೆ ಸೆಕ್ಷನ್ 45ರ  ಅಡಿಯಲ್ಲಿ ಮೀಡಿಯಾ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹಾಗೂ ಆ ಸಂಸ್ಥೆಯ ನಿರ್ದೇಶಕ ಆರ್ ಕೆ ನಂದಾ ಹಾಗೂ ಮಾಜಿ ನಿರ್ದೇಶಕ ಜೆಬಿ ಸುಬ್ರಮಣಿಯಮ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಅಂತೆಯೇ ವಿಚಾರಣೆಯನ್ನು  ಜನವರಿ 7ಕ್ಕೆ ಮುಂದೂಡಿದೆ.

ಮುಂದಿನ ವಿಚಾರಣೆ ವೇಳೆಗೆ ಆರೋಪ ಎದುರಿಸುತ್ತಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ, ಮೀಡಿಯಾ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರತಿನಿಧಿಗಳು ಖುದ್ಧು ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ  ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com