ಪೋರ್ಟ್ ಬ್ಲೇರ್: ಪ್ರವಾಸಕ್ಕೆಂದು ತೆರಳಿ ಅಂಡಮಾನ್ ದ್ವೀಪ ಸಮೂಹದಲ್ಲಿ ಅಪಾಯಕ್ಕೆ ಸಿಲುಕಿದ್ದ ಎಲ್ಲ 1400 ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು, ಈಗಾಗಲೇ ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಕ್ರಮಕೈಗೊಂಡಿದೆ. ನೌಕಾದಳದ ನಾಲ್ಕು ನೌಕೆಗಳನ್ನು ರಕ್ಷಣೆಗೆ ರವಾನಿಸಲಾಗಿದೆ. ಪ್ರಸ್ತುತ ಅಂಡಮಾನ್ ದ್ವೀಪದಲ್ಲಿ ಚಂಡ ಮಾರುತದ ಪ್ರಭಾವ ತಗ್ಗಿರುವ ಹಿನ್ನಲೆಯಲ್ಲಿ ಪೋರ್ಟ್ ಬ್ಲೇರ್ ನಲ್ಲಿ ನೌಕೆಗಳು ಸಿದ್ಧವಾಗಿದ್ದು, ತುರ್ತಾಗಿ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳತ್ತ ಧಾವಿಸಿವೆ. ಪ್ರವಾಸಿಗರ ಕುಟುಂಬಸ್ಥರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಂಡಮಾನ್ ದ್ವೀಪದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ದ್ವೀಪ ಸಮೂಹದ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಸುಮಾರು 1400ಕ್ಕೂ ಅಧಿಕ ಮಂದಿ ಅಪಾಯಕ್ಕೆ ಸಿಲುಕಿದ್ದರು. ಪ್ರವಾಸಿಗರು ಅಪಾಯಕ್ಕೆ ಸಿಲುಕಿರುವ ಕುರಿತು ಸ್ಥಳೀಯ ಆಡಳಿತ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದಂತೆಯೇ ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ನೌಕಾದಳ ಸಿದ್ಧವಾಗಿತ್ತು. ಆದರೆ ನಿನ್ನೆ ದ್ವೀಪ ಸಮೂಹದಲ್ಲಿ ಭಾರಿ ಮಳೆಯೊಂದಿಗೆ ಚಂಡಮಾರುತವಿದ್ದ ಕಾರಣ ನಾಲ್ಕೂ ನೌಕೆಗಳು ರಾಜಧಾನಿ ಹಪೋರ್ಟ್ ಬ್ಲೇರ್ ನಲ್ಲೇ ಲಂಗರು ಹಾಕಿದ್ದವು.
ಇದೀಗ ಚಂಡಮಾರುತದ ಅಬ್ಬರ ಕಡಿಮೆಯಾಗಿದ್ದು, ಯಾವುದೇ ಕ್ಷಣದಲ್ಲಿ ನೌಕಾಪಡೆಯ ನೌಕೆಗಳು ದ್ವೀಪಗಳತ್ತ ಪ್ರಯಾಣ ಬೆಳೆಸಿ ಎಲ್ಲ ಪ್ರವಾಸಿಗರನ್ನು ಭಾರತಕ್ಕೆ ವಾಪಸ್ ಕರೆತರಲಿದೆ. ಕಾರ್ಯಾಚರಣೆಗೆಂದೇ ನೌಕಾದಳ ಬಿಟ್ರಾ, ಬಂಗಾರಂ, ಕುಂಭೀರ್ ಮತ್ತು ಎಲ್ ಸಿಯು 38 ನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳತ್ತ ಪಯಣ ಬೆಳೆಸಲಿವೆ.
ನಿನ್ನೆಯೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತಾದರೂ ಚಂಡಮಾರುತವಿದ್ದ ಕಾರಣ ಎಲ್ಲ ನಾಲ್ಕೂ ನೌಕೆಗಳು ಪೋರ್ಟ್ ಬ್ಲೇರ್ ನಲ್ಲೇ ಲಂಗರು ಹಾಕಿದ್ದವು. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಇಂದು ಚಾಲನೆ ನೀಡಲಾಗುತ್ತಿದೆ. ಸುಮಾರು 60ಕ್ಕೂ ಹೆಚ್ಚು ಮಂದಿ ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿದ್ದು, ದ್ವೀಪಗಳಲ್ಲಿರುವ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಿದ್ದಾರೆ. ಅಂಡಮಾನ್ ದ್ವೀಪಸಮೂಹಗಳಲ್ಲೇ ಹ್ಯಾವ್ಲಾಕ್ ದ್ವೀಪ ಅತ್ಯಂತ ಸುಂದರ ಮತ್ತು ವಿಶಾಲ ದ್ವೀಪವಾಗಿದ್ದು, ದ್ವೀಪದಲ್ಲಿನ ಬೀಚ್ ಹಾಗೂ ಪ್ರಕೃತಿ ಸೌಂದರ್ಯ ನೋಡಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ರಾಜಧಾನಿ ಪೋರ್ಟ್ ಬ್ಲೇರ್ ನಿಂದ ಈ ದ್ವೀಪ ಸುಮಾರು 40 ಕಿ.ಮೀ ದೂರದಲ್ಲಿದೆ.
Advertisement