ಮಹಿರ್ ಖಾನ್ ರಯೀಸ್ ಚಿತ್ರದ ಪ್ರಚಾರ ಮಾಡುವುದಿಲ್ಲ: ರಾಜ್ ಠಾಕ್ರೆಗೆ ಶಾರೂಖ್ ಭರವಸೆ

ರಯೀಸ್ ಚಿತ್ರದಲ್ಲಿ ನಟಿಸಿರುವ ಪಾಕ್ ಕಲಾವಿದ ಮಹಿರ್ ಖಾನ್ ಚಿತ್ರದ ಪ್ರಚಾರ ಮಾಡುವುದಿಲ್ಲ ಎಂದು ಎಂಎನ್ಎಸ್ ಗೆ ಶಾರೂಖ್ ಖಾನ್ ಭರವಸೆ ನೀಡಿದ್ದಾರೆ.
ರಾಜ್ ಠಾಕ್ರೆ, ಶಾರೂಖ್ ಖಾನ್( ಸಂಗ್ರಹ ಚಿತ್ರ)
ರಾಜ್ ಠಾಕ್ರೆ, ಶಾರೂಖ್ ಖಾನ್( ಸಂಗ್ರಹ ಚಿತ್ರ)
ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ನಟನೆಯ ರಯೀಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದಲ್ಲಿ ನಟಿಸಿರುವ ಪಾಕ್ ಕಲಾವಿದ ಮಹಿರ್ ಖಾನ್ ಚಿತ್ರದ ಪ್ರಚಾರ ಮಾಡುವುದಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಗೆ ಶಾರೂಖ್ ಖಾನ್ ಭರವಸೆ ನೀಡಿದ್ದಾರೆ. 
ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿ ಮಾತನಾಡಿರುವ ಶಾರೂಖ್ ಖಾನ್, ತಮ್ಮ ಚಿತ್ರದ ಪ್ರಚಾರಕ್ಕೆ ಪಾಕಿಸ್ತಾನಿ ಕಲಾವಿದ ಮಹಿರ್ ಖಾನ್ ಭಾರತಕ್ಕೆ ಆಗಮಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಮುಂದಿನ ಯಾವುದೇ ಚಿತ್ರಗಳಲ್ಲಿ ಪಾಕಿಸ್ತಾನದ ಕಲಾವಿದರೊಂದಿಗೆ ನಟಿಸುವುದಿಲ್ಲ ಎಂದೂ ಹೇಳಿದ್ದಾರೆ. 
ರಯೀಸ್ ಚಿತ್ರದ ಪ್ರಚಾರಕ್ಕಾಗಿ ಪಾಕಿಸ್ತಾನಿ ಕಲಾವಿದ ಮಹಿರ್ ಖಾನ್ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ವದಂತಿಗಳಿಗೆ ತೆರೆ ಎಳೆಯಲು ಸ್ವತಃ ಶಾರೂಖ್ ಖಾನ್ ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದು ಮಹಿರ್ ಖಾನ್ ಚಿತ್ರದ ಪ್ರಚಾರ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 
ಶಾರೂಖ್ ಖಾನ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಎಂಎನ್ಎಸ್ ಜ.25 ರಂದು ಬಿಡುಗಡೆಯಾಗಲಿರುವ ರಯೀಸ್ ಸಿನಿಮಾಗೆ ಅಡ್ಡಿಪಡಿಸುವುದಿಲ್ಲ ಎಂಬ ನಿರೀಕ್ಷೆ ಇದೆ. ಸೆ.18 ರಂದು ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿ 19 ಯೋಧರನ್ನು ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕ್ ಕಲಾವಿದರನ್ನು ಬಹಿಷ್ಕರಿಸುವಂತೆ ಎಂಎನ್ಎಸ್ ಕರೆ ನೀಡಿತ್ತು. ಈ ಬಗ್ಗೆ ಕಲದಿನಗಳ ಕಾಲ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com