ಕಾಣೆಯಾದ ವಿದ್ಯಾರ್ಥಿಗಾಗಿ ಇಡೀ ಜೆ ಎನ್ ಯು ಆವರಣ ಹುಡುಕಿ; ಪೊಲೀಸರಿಗೆ ಹೈಕೋರ್ಟ್ ಸೂಚನೆ

ಕಾಣೆಯಾದ ಜವಾಹರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರನ್ನು ಹುಡುಕಲು ವಿಶ್ವವಿದ್ಯಾಲಯ ಪ್ರತಿ ಮೂಲೆಯನ್ನು ಶೋಧಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಕ್ರೈಮ್ ಘಟಕದ
ನಜೀಬ್ ಅಹ್ಮದ್ ಶೋಧಕ್ಕೆ ಆಗ್ರಹಿಸಿ ಪ್ರತಿಭಟನೆ (ಸಂಗ್ರಹ ಚಿತ್ರ)
ನಜೀಬ್ ಅಹ್ಮದ್ ಶೋಧಕ್ಕೆ ಆಗ್ರಹಿಸಿ ಪ್ರತಿಭಟನೆ (ಸಂಗ್ರಹ ಚಿತ್ರ)
ನವದೆಹಲಿ: ಕಾಣೆಯಾದ ಜವಾಹರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರನ್ನು ಹುಡುಕಲು ವಿಶ್ವವಿದ್ಯಾಲಯ ಪ್ರತಿ ಮೂಲೆಯನ್ನು ಶೋಧಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಕ್ರೈಮ್ ಘಟಕದ ಪೊಲೀಸರಿಗೆ ಸೂಚಿಸಿದೆ. 
ನ್ಯಾಯಾಧೀಶ ಜಿ ಎಸ್ ಸಿಸ್ತಾನಿ ಮತ್ತು ನ್ಯಾಯಾಧೀಶ ವಿನೋದ್ ಗೋಯಲ್ ಅವರನ್ನು ಒಳಗೊಂಡ ನ್ಯಾಯಪೀಠ, ಅಹ್ಮದ್ ಅವರನ್ನು ಶೋಧಿಸಲು, ಪ್ರತಿ ಕೊಠಡಿ, ಹಾಸ್ಟೆಲ್ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣವನ್ನು ಹುಡುಕಬೇಕೆಂದು ಪೊಲೀಸರಿಗೆ ಸೂಚಿಸಿದೆ.
ಪೊಲೀಸರು ಮತ್ತು ದೆಹಲಿ ಸರ್ಕಾರ ತಮ್ಮ ಮಗನನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಕೋರಿ ನಜೀಬ್ ತಾಯಿ ಫಾತಿಮಾ ನಫೀಸ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತ್ತು. 
ಅಕ್ಟೋಬರ್ ೧೪-೧೫ ರ ರಾತ್ರಿಯಲ್ಲಿ ಆರ್ ಎಸ್ ಎಸ್ ನ ವಿದ್ಯಾರ್ಥಿ ಘಟಕ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ನ ಸದಸ್ಯರೊಂದಿಗೆ ಜಟಾಪಟಿ ನಡೆದ ಮೇಲೆ ಎಂ ಎಸ್ ಸಿ ವಿದ್ಯಾರ್ಥಿ, ೨೭ ವರ್ಷದ ಅಹ್ಮದ್ ಜೆ ಎನ್ ಯು ವಿದ್ಯಾರ್ಥಿನಿಲಯದಿಂದ ಕಾಣೆಯಾಗಿದ್ದರು. 
ಆದರೆ ಈ ಕಾಣೆಯಾದ ಪ್ರಕರಣಕ್ಕೆ ತಮ್ಮ ಪಾತ್ರ ಇಲ್ಲ ಎಂದು ಎಬಿವಿಪಿ ತಿಳಿಸಿತ್ತು. 
ಅಹ್ಮದ್ ಅವರಿಗೆ ಥಳಿಸಿದರು ಎಂದು ಆರೋಪಿಸಲಾದ ನಾಲ್ವರು ವಿದ್ಯಾರ್ಥಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು ಮತ್ತು ಇದರಿಂದ ಸುಳಿವು ಸಿಗಬಹುದು ಎಂದು ಪೊಲೀಸರು ಕೋರ್ಟ್ ಗೆ ಹೇಳಿದ್ದಾರೆ. 
ಜೆ ಎನ್ ಯು ವಿದ್ಯಾರ್ಥಿಯನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿರುವುದಕ್ಕೆ ನೋವಾಗಿದೆ ಎಂದು ಇದಕ್ಕೂ ಮುಂಚಿತವಾಗಿ ತಿಳಿಸಿದ್ದ ಕೋರ್ಟ್, ಯಾತನೆಗೆ ಒಳಗಾಗಿರುವ ತಾಯಿಗೆ ಅವರ ಮಗನನ್ನು ತಂದೊಪ್ಪಿಸಿ ಎಂದಿತ್ತು. 
ಈಗ ಡಿಸೆಂಬರ್ ೨೨ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com