ನವದೆಹಲಿ: ನೋಟು ನಿಷೇಧ ಪ್ರಕ್ರಿಯೆಯಿಂದ ಪ್ರಸ್ತುತ ನಮಗೆ ತಾತ್ಕಾಲಿಕ ತೊಂದರೆಯಾಗಿರಬಹುದು ಆದರೆ ದೀರ್ಘಕಾಲಿಕ ಲಾಭವಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಎಫ್ ಐಸಿಸಿಐ) ಸಂಸ್ಥೆ ಆಯೋಜಿಸಿದ್ದ 89ನೇ ವಾರ್ಷಿಕ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ವಿಪಕ್ಷಗಳು ನೋಟು ನಿಷೇಧವನ್ನು ಟೀಕಿಸುತ್ತಿವೆ. ಆದರೆ ಪ್ರಸ್ತುತ ದೇಶದ ಜನರಿಗೆ ಇದರಿಂದ ತೊರೆಯಾಗುತ್ತಿರಬಹುದು. ಆದರೆ ಭವಿಷ್ಯದಲ್ಲಿ ದೀರ್ಘಕಾಲಿಕ ಲಾಭವಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.
ನೋಟು ನಿಷೇಧ ಎನ್ ಡಿಎ ಸರ್ಕಾರದ ದಿಟ್ಟ ಕ್ರಮ ಎಂದು ಹೇಳಿದ ಜೇಟ್ಲಿ, ಯುಪಿಎ ಸರ್ಕಾರ ಮಾಡಲಾಗದ್ದನ್ನು ಎನ್ ಡಿಎ ಸರ್ಕಾರ ಮಾಡಿದೆ. ಇಂದಿರಾಗಾಂಧಿ ಸಾಧಿಸಲಾಗದ್ದನ್ನು ಮೋದಿ ಸರ್ಕಾರ ಮಾಡಿ ತೋರಿಸಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಹಳೆಯ ನೋಟು ನಿಷೇಧ ಬಳಿಕ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಆರ್ ಬಿಐ ಶೀಘ್ರದಲ್ಲೇ ಶಾಶ್ವತ ಪರಿಹಾರ ನೀಡಲಿದೆ. ಹೊಸ ನೋಟುಗಳನ್ನು ಆರ್ ಬಿಐ ಪರಿಣಾಮಕಾರಿಯಾಗಿ ಚಲಾವಣೆ ತರಲಿದೆ ಎಂದು ಹೇಳಿದರು.
ಪ್ರಸ್ತುತ ಭಾರತ ದೇಶಕ್ಕೆ ಯಾವುದೇ ರೀತಿಯ ದಿಟ್ಟ ಕ್ರಮವನ್ನು ಕೈಗೊಳ್ಳುವ ಸಾಮರ್ಥ್ಯವಿದೆ. ನೋಟು ನಿಷೇಧ ಇದಕ್ಕೊಂದು ಸ್ಪಷ್ಟ ಉದಾಹರಣೆಯಾಗಿದೆ. ಸರ್ಕಾರದ ನಿರ್ಧಾರದಿಂದ ಕಳೆದ 7 ದಶಕದಿಂದ ದೇಶವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಕಪ್ಪುಹಣವೆಂಬ ಸಮಸ್ಯೆಯನ್ನೂ ನಾವು ಕ್ರಮೇಣ ಪರಿಷ್ಕರಿಸತೊಡಗಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ.
ನಿಷೇಧವಾದ ಎಲ್ಲ ನೋಟುಗಳನ್ನೂ ಮಾನ್ಯ ಮಾಡುವುದಿಲ್ಲ, ಡಿಜಿಟಲ್ ಹಣದ ಮೂಲಕ ಬಾಕಿ ಕೊರತೆ ನೀಗಿಸುತ್ತೇವೆ
ಇದೇ ವೇಳೆ ನೋಟು ನಿಷೇಧದ ಬಳಿಕ ಬ್ಯಾಂಕುಗಳಿಗೆ ಅಗಮಿಸುತ್ತಿರುವ ಎಲ್ಲ ನೋಟುಗಳನ್ನೂ ಮಾನ್ಯ ಮಾಡುವುದಿಲ್ಲ ಎಂದು ಹೇಳಿದ ಜೇಟ್ಲಿ, ಆರ್ ಬಿಐ ಮಾಹಿತಿಯಂತೆ ದೇಶಾದ್ಯಂತ 15.44 ಲಕ್ಷ ಕೋಟಿ 500 ಮತ್ತು 1000 ನೋಟುಗಳ ಚಲಾವಣೆಯಲ್ಲಿತ್ತು. ಆದರೆ ನೋಟು ನಿಷೇಧದ ಬಳಿಕ ಈ ನೋಟುಗಳು ಠೇವಣಿ ರೂಪದಲ್ಲಿ ಬ್ಯಾಂಕುಗಳಿಗೆ ಬರುತ್ತಿವೆ. ಈ ಪೈಕಿ ಎಲ್ಲ ನೋಟುಗಳನ್ನೂ ಕೇಂದ್ರ ಸರ್ಕಾರ ಮಾನ್ಯ ಮಾಡುವುದಿಲ್ಲ. ಹಳೆಯ ನೋಟುಗಳಿಗೆ ಬದಲಾಗಿ ಆರ್ ಬಿಐ 500 ಮತ್ತು 2000 ಮುಖಬೆಲೆಯ ನೋಟುಗಳನ್ನು ಹೊರತಂದಿದೆ. ಆದರೆ ಅಮಾನ್ಯಗೊಂಡ ನೋಟುಗಳಷ್ಟೇ ಪ್ರಮಾಣದಲ್ಲಿ ಹೊಸ ನೋಟುಗಳನ್ನು ಚಲಾವಣೆಗೆ ತರುವುದಿಲ್ಲ. ಬದಲಿಗೆ ಡಿಜಿಟಲ್ ಹಣದ ಮೂಲಕ ಬಾಕಿ ಕೊರತೆ ನೀಗಿಸಲಾಗುತ್ತದೆ ಎಂದು ಜೇಟ್ಲಿ ಹೇಳಿದರು.
Advertisement