

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಅಂತರರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಒಂದೇ ನ್ಯಾಯಾಧಿಕರಣ ಸ್ಥಾಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಇರುವ ಒಂದೊಂದು ಅಂತಾರಾಜ್ಯ ನದಿ ನೀರು ಹಂಚಿಕೆ ಬಿಕ್ಕಟ್ಟಿಗೆ ಒಂದೊಂದು ನ್ಯಾಯಾಧಿಕರಣಗಳಿದ್ದು, ಈ ಎಲ್ಲ ನ್ಯಾಯಾಧಿಕಣಗಳನ್ನು ಒಂದೇ ನ್ಯಾಯಾಧಿಕರಣದ ಅಡಿಗೆ ತಂದು ಎಲ್ಲವನ್ನೂ ವಿಲೀನಗೊಳಿಸಲು ಕೇಂದ್ರ ಸರ್ಕಾರ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು. ಹೀಗಾಗಿ ನದಿ ವ್ಯಾಜ್ಯಗಳ ಕಾಯ್ದೆ-1956ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಲಾಗಿತ್ತು. ಅಂತೆಯೇ ಜನವರಿಯಲ್ಲಿ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ನದಿ ವ್ಯಾಜ್ಯ ನಿರ್ಣಯ ಸಮಿತಿ (Dispute Resolution Committee-DRC)ಯನ್ನು ಕೂಡ ರಚನೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ವಿವಾದ ಸಂಬಂಧ ನಿರ್ಣಯ ಕೈಗೊಳ್ಳಲು ಈ ಸಮಿತಿ ನೆರವಾಗಲಿದೆ. ಬಹುತೇಕ ಎಲ್ಲ ನದಿ ವ್ಯಾಜ್ಯಗಳನ್ನು ಡಿಆರ್ ಸಿಯಲ್ಲೇ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಡಿಆರ್ ಸಿ ನಿರ್ಣಯದಿಂದ ರಾಜ್ಯಗಳು ಸಂತೃಪ್ತರಾಗದಿದ್ದಲ್ಲಿ ಮಾತ್ರ ನ್ಯಾಯಾಧಿಕರಣದ ಮೆಟ್ಟೇಲೇರಬಹುದಾಗಿದೆ.
ಪ್ರಸ್ತಾವಿತ ತಿದ್ದುಪಡಿ ಕಾಯ್ದೆಯಡಿ 2 ವರ್ಷದೊಳಗೆ ನದಿ ವಿವಾದ ಇತ್ಯರ್ಥಗೊಳಿಸುವ ಗಡುವು ವಿಧಿಸಲಾಗಿದ್ದು, ಈಗಿರುವ ಕಾಯ್ದೆಯಲ್ಲಿ 3 ವರ್ಷದೊಳಗೆ ತೀರ್ಪು ಕೊಡಬೇಕು. ಆಗದಿದ್ದರೆ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವಿದೆ. ಈ ವರೆಗೆ ಕಾವೇರಿ ನ್ಯಾಯಾಧಿಕರಣ, ಮಹದಾಯಿ ನ್ಯಾಯಾಧಿಕರಣ, ಕೃಷ್ಣಾ ನ್ಯಾಯಾಧಿಕರಣ ಸೇರಿ ವಿವಿಧ 8 ನ್ಯಾಯಾಧಿಕರಣಗಳು ರಚಿತವಾಗಿವೆ. ಯಾವುದಾದರೂ ರಾಜ್ಯವೊಂದು ಅಂತಾರಾಜ್ಯ ನದಿ ವಿವಾದ ಮಾತುಕತೆಯಲ್ಲಿ ಇತ್ಯರ್ಥವಾಗಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ, ಸರ್ಕಾರವು ನ್ಯಾಯಾಧಿಕರಣ ರಚಿಸುವ ಅಧಿಕಾರ ಹೊಂದಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಶಶಿ ಶೇಖರ್ ಅವರು, ಅಂತಾರಾಜ್ಯ ಜಲ ವ್ಯಾಜ್ಯಗಳನ್ನು ಪರಿಷ್ಕರಣೆಗಾಗಿ ಇನ್ನು ಮುಂದೆ ಒಂದೇ ನ್ಯಾಯಾಧಿಕರಣವಿರಲಿದೆ. ಈ ನ್ಯಾಯಾಧಿಕರಣದ ಅಡಿಯಲ್ಲೇ ಎಲ್ಲ ರಾಜ್ಯಗಳ ನದಿ ವ್ಯಾಜ್ಯೆಗಳ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಈ ನ್ಯಾಯಾಧಿರಣದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.