ಯೋಧ ಹನುಮಂತಪ್ಪ ಕೊಪ್ಪದ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಕ್ಷಿಣಿಸುತ್ತಿದ್ದು...
ಹನುಮಂತಪ್ಪ ಕೊಪ್ಪದ್
ಹನುಮಂತಪ್ಪ ಕೊಪ್ಪದ್
ನವದೆಹಲಿ: ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಕ್ಷಿಣಿಸುತ್ತಿದ್ದು, ತಜ್ಞ ವೈದ್ಯರ ಚಿಕಿತ್ಸೆಗೆ ಯೋಧನ ದೇಹ ಸ್ಪಂದಿಸುತ್ತಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿ 6 ದಿನಗಳ ನಂತರ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ನಿವಾಸಿ ಹನುಮಂತಪ್ಪ ಕೊಪ್ಪದ್ ಅವರು ಕೋಮಾಗೆ ಜಾರಿದ್ದು, ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಥೆರಪಿ ಉತ್ತಮ ಚಿಕಿತ್ಸೆಯ ಬಳಿಕವೂ ಯೋಧನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ. ಹನುಮಂತಪ್ಪ ಅವರ ಎರಡೂ ಶ್ವಾಸಕೋಶಗಳಿಗೂ ನ್ಯೂಮೋನಿಯಾ ಹಾಗೂ ಕಿಡ್ನಿ, ಲಿವರ್ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
'ಯೋಧನ ಸ್ಥಿತಿ ಇನ್ನೂ ಗಂಭೀರವಾಗಿದೆ. ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಮುಂದಿನ 2, 3 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುವುದು' ಎಂದು ಇಂದು ಬೆಳಗ್ಗೆ ಆರ್ ಆರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯ ಸ್ಥಿತಿ ಕೋಮಾ ಸ್ಥಿತಿಯಲ್ಲೇ ಮುಂದುವರಿದಿದ್ದು, ಆರ್ ಆರ್ ಆಸ್ಪತ್ರೆಯ 7 ಜನರ ವೈದ್ಯರ ತಂಡ ಕೊಪ್ಪದ್  ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ನಿನ್ನೆ ರಾತ್ರಿ ನಾವು ಆತನನ್ನು ಐಸಿಯುನಲ್ಲಿ ನೋಡಿದ್ದೇವೆ. ಬುಧವಾರ ಬೆಳಗ್ಗೆ ಮತ್ತೆ 4 ಮಂದಿಗೆ ನೋಡಲು ಅವಕಾಶ ನೀಡಿದ್ದಾರೆ. ನಾವು ಆರು ಮಂದಿ ಬೆಟಗೇರಿಯಿಂದ ದೆಹಲಿಯ ಆರ್ ಆರ್ ಆಸ್ಪತ್ರೆಗೆ ಆಗಮಿಸಿದ್ದೇವೆ. ಕೊಪ್ಪದ್ ಸ್ಥಿತಿ ಬಗ್ಗೆ ಹೇಳಲು ಇನ್ನೂ 3, 4 ದಿನ ಬೇಕೆಂದು ವೈದ್ಯರು ಹೇಳಿರುವುದಾಗಿ ಹನುಮಂತ ಕೊಪ್ಪದ್ ಸಂಬಂಧಿ ಸುಭಾಷ್ ಅವರು ಮಾಧ್ಯಮಕ್ಕೆ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com