ಯೆಮೆನ್ ರಕ್ಷಣಾ ಕಾರ್ಯಾಚರಣೆ ಅಧ್ಯಯನಕ್ಕೆ ಮುಂದಾದ ಬ್ರಿಟನ್

ಯೆಮೆನ್ ಆಂತರಿಕ ಬಿಕ್ಕಟ್ಟಿನಿಂದಾಗಿ ಅಪಾಯದಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳ ರಕ್ಷಣೆಗೆ ನಮ್ಮ ಸೇನೆ ಕೈಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಇದೀಗ ವಿಶ್ವಕ್ಕೇ ಮಾದರಿಯಾಗಿದ್ದು, ಈ ಅಭೂತಪೂರ್ವ ಕಾರ್ಯಾಚರಣೆಯ ಬಗ್ಗೆ ತಿಳಿಯಲು ಬ್ರಿಟನ್ ಸರ್ಕಾರ ಮುಂದಾಗಿದೆ..
ಯೆಮೆನ್ ನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು (ಸಂಗ್ರಹ ಚಿತ್ರ)
ಯೆಮೆನ್ ನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು (ಸಂಗ್ರಹ ಚಿತ್ರ)
Updated on

ನವದೆಹಲಿ: ಯೆಮೆನ್ ಆಂತರಿಕ ಬಿಕ್ಕಟ್ಟಿನಿಂದಾಗಿ ಅಪಾಯದಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳ ರಕ್ಷಣೆಗೆ ನಮ್ಮ ಸೇನೆ ಕೈಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಇದೀಗ ವಿಶ್ವಕ್ಕೇ  ಮಾದರಿಯಾಗಿದ್ದು, ಈ ಅಭೂತಪೂರ್ವ ಕಾರ್ಯಾಚರಣೆಯ ಬಗ್ಗೆ ತಿಳಿಯಲು ಬ್ರಿಟನ್ ಸರ್ಕಾರ ಮುಂದಾಗಿದೆ.

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಆಪರೇಷನ್ ರಾಹತ್ ಹೆಸರಿನಲ್ಲಿ ಭಾರತೀಯ ಸೇನೆ ಆರಂಭಿಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಬರೊಬ್ಬರಿ 5, 600 ಭಾರತೀಯರನ್ನು ಸುರಕ್ಷಿತವಾಗಿ  ಕರೆತರಲಾಯಿತು. ಅಂದು ಭಾರತೀಯರ ರಕ್ಷಣೆಗೆ ಜನರಲ್ ವಿಕೆ ಸಿಂಗ್ ಅವರು ನೇತೃತ್ವ ವಹಿಸಿ ಸ್ವತಃ ಅವರೇ ಭಾರತೀಯ ನೌಕಾಪಡೆಯೊಂದಿಗೆ ತೆರಳಿ ರಕ್ಷಣಾ ಕಾರ್ಯಾಚರಣೆಯ  ಮೇಲುಸ್ತುವಾರಿ ನೋಡಿಕೊಂಡಿದ್ದರು. ಸೇನೆ ನಡೆಸಿದ ಕಾರ್ಯಾಚರಣೆ ಕೇವಲ 10 ದಿನಗಳ ಅಂತರದಲ್ಲಿ ನಡೆಯಿತು ಎನ್ನುವುದು ಮತ್ತೊಂದು ವಿಶೇಷ. ಇನ್ನೂ ಪ್ರಮುಖ ವಿಚಾರವೆಂದರೆ  ಹಿಂಸಾಚಾರ ಪೀಡಿತ ಯೆಮೆನ್ ನಲ್ಲಿ ತಮ್ಮ ಪ್ರಜೆಗಳನ್ನೇ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ವಿಶ್ವದ ಇತರೆ ರಾಷ್ಟ್ರಗಳು ತಿಣುಕಾಡುತ್ತಿದ್ದರೆ, ಭಾರತೀಯ ಸೈನಿಕರು ಮಾತ್ರ  ಭಾರತೀಯರಲ್ಲದೇ ಅಪಾಯದಲ್ಲಿ ಸಿಲುಕಿದ್ದ 960 ವಿದೇಶಿಗರನ್ನು ಕೂಡ ರಕ್ಷಣೆ ಮಾಡಿದ್ದರು. ಈ ಪೈಕಿ ಯೆಮೆನ್ ನಾಗರೀಕರು ಕೂಡ ಸೇರಿದ್ದರು. ಈ ಮೂಲಕ ಭಾರತೀಯ ಸೇನೆ ವಿಶ್ವಕ್ಕೇ ತಮ್ಮ  ಮಾನವೀಯತೆ ತೋರಿದ್ದರು.

ಇದು ಇದೀಗ ಇಡೀ ವಿಶ್ವದ ಗಮನ ಸೆಳೆದಿದ್ದು, ಭಾರತೀಯ ಸೇನೆಯ ಕೆಚ್ಚೆದೆಯ ಹೋರಾಟ ಮತ್ತು ರಕ್ಷಣಾ ಕಾರ್ಯಾಚರಣೆಯ ತಂತ್ರಗಾರಿಕೆಯನ್ನು ತಿಳಿಯಲು ವಿಶ್ವದ ನಾನಾ ದೇಶಗಳು  ಮುಂದಾಗಿವೆ. ಇದರ ಒಂದು ಭಾಗವೇ ಬ್ರಿಟನ್ ಸರ್ಕಾರ "ಆಪರೇಷನ್ ರಾಹತ್" ಕಾರ್ಯಾಚರಣೆಯ ಅಧ್ಯಯನಕ್ಕೆ ಮುಂದಾಗಿರುವುದು.

ಈ ಬಗ್ಗೆ ಮಾತನಾಡಿರುವ ರಾಯಲ್ ನೇವಿ ಸಲಹೆಗಾರ ಕ್ಯಾಪ್ಟನ್ ಸ್ಟುವರ್ಟ್ ಬೋರ್ಲಾಂಡ್ ಅವರು, ಭಾರತ ಕೈಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಅಭೂತಪೂರ್ವ ಯಶಸ್ಸು ಸಾಧಿಸಿದೆ.  ಭಾರತೀಯ ಸೈನಿಕರು ಕೇವಲ ಭಾರತೀಯರನ್ನು ಮಾತ್ರವಲ್ಲದೇ ಬ್ರಿಟನ್ ಪ್ರಜೆಗಳನ್ನೂ ಕೂಡ ಗಲಭೆ ಪೀಡಿತ ಯೆಮೆನ್ ನಿಂದ ರಕ್ಷಿಸಿದ್ದಾರೆ. ಭಾರತೀಯ ಸೈನಿಕರ ಮಾನವೀಯತೆ ವಿಶ್ವಕ್ಕೇ  ಮಾದರಿಯಾಗಲಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ಕೇವಲ 10 ದಿನಗಳ ಅಂತರದಲ್ಲಿ ಕಾರ್ಯಾಚರಣೆ ನಡೆಸಿರುವುದು ನಿಜಕ್ಕೂ ದಾಖಲೆಯೇ ಸರಿ. ಇಷ್ಟು ಪ್ರಮಾಣದ ಜನರನ್ನು ಇಷ್ಟು  ಕಡಿಮೆ ಅವಧಿಯಲ್ಲಿ ರಕ್ಷಣೆ ಮಾಡಿರುವುದು ನಿಜಕ್ಕೂ ಶ್ಲಾಘನಾರ್ಹ ವಿಚಾರ. ಇದೇ ಕಾರಣಕ್ಕಾಗಿ ತಾವು ಭಾರತೀಯ ಸೇನೆ ಕೈಗೊಂಡಿದ್ದ "ಆಪರೇಷನ್ ರಾಹತ್" ಕಾರ್ಯಾಚರಣೆಯನ್ನು  ಅಧ್ಯಯನ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತೀಯ ಸೇನೆಯ ಸಾಮರ್ಥ್ಯವನ್ನು ಕೊಂಡಾಡಿದ ಬೋರ್ಲ್ಯಾಂಡ್ ಅವರು, "ವಿಶ್ವದ ಯಾವುದೇ ಮೂಲೆಯಲ್ಲಿಯೂ ಯಾವುದೇ ರೀತಿಯ ಮಾನವೀಯ ಕಾರ್ಯಾಚರಣೆಗಳನ್ನು  ನಡೆಸಲು ಭಾರತ ಶಕ್ತವಾಗಿದ್ದು, ಭೂಕಂಪದಂತಹ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಭಾರತೀಯ ಭದ್ರತಾ ಪಡೆಗಳು ತುರ್ತಾಗಿ ಘಟನಾ ಸ್ಥಳವನ್ನು ತಲುಪಿ ರಕ್ಷಣಾ ಕಾರ್ಯಾಚರಣೆ  ಆರಂಭಿಸಬಲ್ಲವು. ಭಾರತೀಯ ಸೇನೆಗೂ ಬ್ರಿಟನ್ ಅವಿನಾಭಾವ ಸಂಬಂಧವಿದ್ದು, ಭಾರತ ನಮಗೆ ಒಂದು ರೀತಿ ಸಹೋದರ ರಾಷ್ಟ್ರವಿದ್ದಂತೆ. ಸಾಕಷ್ಟು ವಿಚಾರಗಳಲ್ಲಿ ನಮ್ಮ ಅಭಿರುಚಿಗಳು  ಒಂದೇ ಆಗಿರುತ್ತವೆ. ಭಾರತೀಯ ಸೇನೆಗೆ ನಮ್ಮಲ್ಲಿ ವಿಶೇಷ ಸ್ಥಾನಮಾನವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com