ನವದೆಹಲಿ: ಇಡೀ ದೇಶದ ಗಮನ ಸೆಳೆದಿರುವ ಜೆಎನ್ ಯು ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹ ಪ್ರಕರಣ ಸಂಬಂಧ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ವಿದ್ಯಾರ್ಥಿಯೊಬ್ಬ ಬಹಿರಂಗ ಪತ್ರ ಬರೆದಿದ್ದಾರೆ.
ಆರು ಜೆಎನ್ಯು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಇರಾನಿ ಅವರಿಗೆ ಬಹಿರಂಗ ಪತ್ರ ಬರೆದು ನಾನು ನಿಮ್ಮ ಮಗನಲ್ಲ, ಆದರೆ ನಿಮ್ಮ ರಾಜಕೀಯ ವಿರೋಧಿ ಎಂದು ತಿಳಿಸಿದ್ದಾನೆ.
ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಸ್ಮೃತಿ ಇರಾನಿ ಮಾಡಿದ್ದ ಭಾವನಾತ್ಮಕ ಭಾಷಣಕ್ಕೆ ಪ್ರತಿಯಾಗಿ ಜೆಎನ್ಯು ವಿದ್ಯಾರ್ಥಿ ಅನಂತ್ ಪ್ರಕಾಶ್ ಈ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸ್ಮೃತಿ ಅವರ ಭಾಷಣವನ್ನು ತೀವ್ರವಾಗಿ ಖಂಡಿಸಿರುವ ಅನಂತ್, ರೋಹಿತ್ ವೇಮುಲ ಸಾವಿಗೆ ಕಣ್ಣೀರಿಟ್ಟ ಸ್ಮೃತಿ ಅವರಿಗೆ ರೋಹಿತ್ ತಾಯಿಯ ನೋವು ಅರ್ಥವಾಗಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ತಮ್ಮನ್ನು ರೋಹಿತ್ ತಾಯಿ ಸ್ಥಾನದಲ್ಲಿ ಕಾಣುತ್ತಿರುವ ಸ್ಮೃತಿ ಇರಾನಿ ಮನುಸ್ಮೃತಿ ಓದಿದರೆ ಖಂಡಿತ ಬಿಜೆಪಿ ತೊರೆಯುತ್ತಾರೆ ಎಂದು ಹೇಳಿರುವ ಅನಂತ್, ದಲಿತರ ನೋವಿಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಸ್ಮೃತಿ ಇರಾನಿ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
Advertisement