ಪಠಾಣ್ ಕೋಟ್: ಸತತ 3 ದಿನಗಳ ಕಾಲ ಉಗ್ರರ ದಾಳಿಯಿಂದ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಮಂಗಳವಾರ ಮತ್ತೆ ಬಾಂಬ್ ಸ್ಫೋಟದ ಸದ್ದು ಕೇಳಿಬಂದಿದೆ.
ಮಂಗಳವಾರ ಮಧ್ಯಾಹ್ನ ಈ ಸ್ಫೋಟದ ಸದ್ದು ಕೇಳಿಬಂದಿದ್ದು, ವಾಯುನೆಲೆಯ ಸುತ್ತಮುತ್ತ ಮತ್ತೆ ಗಂಭೀರ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆಯ ಮೂಲಗಳು ಇದೊಂದು ನಿಯಂತ್ರಿತ ಸ್ಫೋಟವಾಗಿದೆ ಎಂದು ಸ್ಪಷ್ಟಪಡಿಸಿದೆ. ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಕೆಳಗೆ ಬಿದ್ದಿದ್ದ ಜೀವಂತ ಗ್ರೆನೇಡ್ ಗಳನ್ನು ಇಂದು ಭಾರತೀಯ ಸೇನೆ ನಾಶಪಡಿಸಿದೆ. ಈ ವೇಳೆ ಉಂಟಾದ ಸ್ಫೋಟದಿಂದಲೇ ಭಾರಿ ಶಬದ್ಧ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಠಾಣ್ ಕೋಟ್ ಗೆ ತೆರಳಿದ್ದು, ಘಟನಾ ಸ್ಥಳದಿಂದ ನೇರವಾಗಿ ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ದಾಳಿ ಸಂಬಂಧ ಆಂತರಿಕ ತನಿಖೆ
ಪಠಾಣ್ ಕೋಟ್ ವಾಯುನೆಲೆ ಉಗ್ರ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಭಾರತೀಯ ಸೇನೆ ಆಂತರಿಕ ತನಿಖೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಉಗ್ರರ ಕುರಿತಂತೆ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಸಲ್ವಿಂದರ್ ಸಿಂಗ್ ಅವರ ಹೇಳಿಕೆಯನ್ನು ಸೈನಾಧಿಕಾರಿಗಳು ಹಗುರವಾಗಿ ಅಥವಾ ಸಾಮಾನ್ಯ ಎಂಬಂತೆ ಪರಿಗಣಿಸಿದರೆ ಎಂಬ ಹಲವು ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
Advertisement