ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಕಳೆದ ಮಂಗಳವಾರವಷ್ಟೇ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಗೃಹ ಸಚಿವರೂ ಆಗಿರುವ ಪರಮೇಶ್ವರ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ವಹಿಸುವುದಾಗಿ ಸಿಎಂ ಹೇಳಿದ್ದರು. ಇಂದು ಆ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪರಮೇಶ್ವರ ಅವರು ಸಿದ್ದು ಸಂಪುಟಕ್ಕೆ ಸೇರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ನೀಡುವಂತೆ ಕೇಳಿದ್ದರು. ಆದರೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಬಳಿ ತುಮಕೂರು ಉಸ್ತುವಾರಿ ಇರುವುದರಿಂದ ಅದನ್ನು ಬದಲಾವಣೆ ಮಾಡುವ ಮನಸ್ಸು ಸಿಎಂ ಮಾಡಿರಲಿಲ್ಲ. ಪರಮೇಶ್ವರ ಕೂಡ ಈ ವಿಚಾರದಲ್ಲಿ ಪಟ್ಟು ಹಿಡಿದಿರಲಿಲ್ಲ.
ಇತ್ತೀಚಿಗಷ್ಟೇ ಸಚಿವ ಅಭಯಚಂದ್ರ ಜೈನ್ ಅವರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ತಮಗೆ ಬೇಡ ಎಂದಿದ್ದರು. ಹೀಗಾಗಿ ಅವರ ಹೊಣೆಯನ್ನು ಪರಮೇಶ್ವರ ಅವರಿಗೆ ವಹಿಸಲಾಗಿದೆ.