ಖಟ್ಮಂಡು: ದೇಶದ ನೂತನ ಸಂವಿಧಾನಕ್ಕೆ ತಿದ್ದುಪಡಿ ತರಲು ನೇಪಾಳ ಸಂಸತ್ತು ಒಪ್ಪಿಕೊಂಡಿದೆ. ಇದು ಪ್ರತಿಭಟನಾ ನಿರತ ಮಾದೇಶಿಗಳ ಬೇಡಿಕೆಯನ್ನು ಪರಿಶೀಲಿಸಿ ಅವರ ಜನಸಂಖ್ಯೆ ಆಧಾರದ ಮೇಲೆ ಸಂಸತ್ತಿನಲ್ಲಿ ಸೂಕ್ತ ಪ್ರತಿನಿಧಿತ್ವಕ್ಕೆ ಮೀಸಲಾತಿ ನೀಡುವುದರ ಬಗ್ಗೆ ಕ್ರಮ ಕೈಗೊಳ್ಳಲಿದೆ.
೪೬೮ ಸಂಸದರಲ್ಲಿ ೪೬೧ ಜನ ಈ ತಿದ್ದುಪಡಿಯ ಪರವಾಗಿ ಮತ ಚಲಾಯಿಸಿದ್ದರೆ ಏಳು ಜನ ಈ ತಿದ್ದುಪಡಿಯನ್ನು ವಿರೋಧಿಸಿದ್ದಾರೆ.
ಭಾರತದ ಗಡಿಯಲ್ಲಿರುವ ದಕ್ಷಿಣ ತರೈ ಭಾಗದಲ್ಲಿ ವಾಸವಾಗಿರುವ ಮಾದೇಶಿ ಪಕ್ಷಗಳು ನೂತನ ಸಂವಿಧಾನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಸೆಪ್ಟಂಬರ್ ೨೦ ರ ಮತದಾನದಲ್ಲಿ ಪಾಲ್ಗೊಳ್ಳಲು ಕೂಡ ನಿರಾಕರಿಸಿದ್ದರು.
"ಈ ನಡೆ ಪ್ರಗತಿಪರವಾಗಿದ್ದರೂ, ನಮ್ಮೆಲ್ಲ ಬೇಡಿಕೆಗಳನ್ನು ಅವರು ಪೂರೈಸಲು ಒಪ್ಪಿಗೆ ನೀಡಿಲ್ಲ" ಎಂದು ಪ್ರತಿಭಟನಾ ಮೋರ್ಚಾ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ತಮ್ಮನ್ನು ಸಂಪರ್ಕಿಸದೆ ಮಾಡುವ ಯಾವುದೇ ತಿದ್ದುಪಡಿ ಯಶಸ್ವಿಯಾಗುವುದಿಲ್ಲ ಎಂದು ಮಾದೇಶಿ ಮೋರ್ಚಾ ಅಧ್ಯಕ್ಷ ಉಪೇಂದ್ರ ಯಾದವ್ ಹೇಳಿದ್ದಾರೆ.
ಇದೇ ವಿಷಯವಾಗಿ ಭಾರತ ಮತ್ತು ನೇಪಾಳದ ನಡುವೆ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳು ಎದ್ದಿದ್ದವು ಎಂದು ವಿಶ್ಲೇಷಿಸಲಾಗಿತ್ತು.