ಕೊಚ್ಚಿ: ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ವಿರುದ್ಧದ ಎಫ್ಐಆರ್ಗೆ ಕೇರಳ ಹೈಕೋರ್ಟ್ ಶುಕ್ರವಾರ ತಡೆ ನೀಡಿದ್ದು, ಸಿಎಂಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ತ್ರಿಶೂರಿನ ವಿಚಕ್ಷಣ ನ್ಯಾಯಾಲಯ ನಿನ್ನೆ ಉಮನ್ ಚಾಂಡಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿದ ನಂತರ ಪ್ರತಿಪಕ್ಷಗಳು ಸಿಎಂ ರಾಜಿನಾಮೆಗೆ ಒತ್ತಾಯಿಸಿದ್ದವು.
ಆದರೆ ವಿಚಕ್ಷಣ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಾಂಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸಿಎಂ ಹಾಗೂ ಅವರ ಸಂಪುಟದ ಸಹೋದ್ಯೋಗಿ ವಿದ್ಯುತ್ ಸಚಿವ ಆರ್ಯಾಡನ್ ಮೊಹಮ್ಮದ್ ವಿರುದ್ಧ ಎರಡು ತಿಂಗಳವರೆಗೆ ಎಫ್ಐಆರ್ ದಾಖಲಿಸದಂತೆ ತಡೆಯಾಜ್ಞೆ ವಿಧಿಸಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಹೈಕೋರ್ಟ್ ನ್ಯಾಯಮೂರ್ತಿ ಪಿ.ಉಬೈದ್ ಅವರು ಈ ಸಂಬಂಧ ವಿಚಕ್ಷಣ ಕೋರ್ಟ್ನ್ನು ತರಾಟೆಗೆ ತೆಗೆದುಕೊಂಡಿದ್ದು, ವಿಚಕ್ಷಣ ಕೋರ್ಟ್ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.