ಕ್ಯಾಲಿಕಟ್: ಕರ್ನಾಟಕದ ನರ್ಸಿಂಗ್ ಕಾಲೇಜಿನ ರ್ಯಾಗಿಂಗ್ ನಿಂದ ತೀವ್ರ ಅಸ್ವಸ್ಥಳಾಗಿರುವ ದಲಿತ ಯುವತಿ ಕೆ ಪಿ ಅಶ್ವಥಿ ಅವರಿಗೆ ಧನ ಸಹಾಯ ಮಾಡಲು ಹಾಗೂ ಉದ್ಯೋಗ ಭರವಸೆ ನೀಡಲು ಕೇರಳ ಸರ್ಕಾರ ನಿರ್ಣಯಿಸಿದೆ ಎಂದು ಸಚಿವರೊಬ್ಬರು ಶನಿವಾರ ಹೇಳಿದ್ದಾರೆ.
"ಅವರಿಗೆ ಎರಡು ಲಕ್ಷ ರೂ ನೀಡಿದ್ದೇವೆ. ಅವರ ಆಸ್ಪತ್ರೆ ಖರ್ಚು ವೆಚ್ಚಗಳನ್ನು ನೋಡಿಕೊಂಡು ಅವರು ಇಲ್ಲಿಯೇ ನರ್ಸಿಂಗ್ ಓದಲು ಅನುವು ಮಾಡಿಕೊಡವುತ್ತೇವೆ" ಎಂದು ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ ಮತ್ತಿ ಹಿಂದುಳಿದ ವರ್ಗದ ಕಲ್ಯಾಣ ಸಚಿವ ಎ ಕೆ ಬಾಲನ್ ವರದಿಗಾರರಿಗೆ ತಿಳಿಸಿದ್ದಾರೆ.
"ಅವರು ಶಿಕ್ಷಣ ಯಶಸ್ವಿಯಾಗಿ ಮುಗಿಸಿದ ಮೇಲೆ ಉದ್ಯೋಗವನ್ನು ನೀಡಲಿದ್ದೇವೆ" ಎಂದು ರಾಜ್ಯ ಸರ್ಕಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಥಿ ಅವರನ್ನು ಭೇಟಿ ಮಾಡಿದ ಬಾಲನ್ ಹೇಳಿದ್ದಾರೆ.
ಗುಲ್ಬರ್ಗಾದ ಆಲ್ ಕ್ವಮಾರ್ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ 19 ವರ್ಷದ ಕೇರಳದ ಅಶ್ವಥಿ ಅವರನ್ನು ನಾಲ್ವರು ವಿದ್ಯಾರ್ಥಿನಿಯರು ರ್ಯಾಗಿಂಗ್ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಮೇ 9 ರಂದು ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ನಡೆದ ಈ ಘಟನೆಯಲ್ಲಿ ಶೌಚಾಲಯ ಕ್ಲೀನರ್ ಕುಡಿಯುವಂತೆ ಮಾಡಿದ್ದಕ್ಕೆ ಅಶ್ವಥಿ ಅವರಿಗೆ ತೀವ್ರ ಅನಾರೋಗ್ಯವಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರಿಗೆ ಲಕ್ಷ್ಮಿ, ಅಥಿರಾ ಮತ್ತು ಕೃಷ್ಣಪ್ರಿಯ ಎಂಬ ಮೂವರು ಯುವತಿಯರನ್ನು ಬಂಧಿಸಿದ್ದಾರೆ.
ಮತ್ತೊಬ್ಬ ಆರೋಪಿ ಶಿಲ್ಪಾ ಜೋಸ್ ತಲೆಮರೆಸಿಕೊಂಡಿದ್ದು, ಅವರ ನಿರೀಕ್ಷಣಾ ಜಾಮೀನು ಕೇರಳ ಹೈಕೋರ್ಟ್ ನಲ್ಲಿ ಜುಲೈ 8 ಕ್ಕೆ ವಿಚಾರಣೆಗೆ ಬರಲಿದೆ.
ಕ್ಯಾಲಿಕಟ್ ನಲ್ಲೂ ಎಫ್ ಐ ಆರ್ ದಾಖಲಾಗಿದ್ದು ಕೇರಳ ಪೊಲೀಸರು ಕರ್ನಾಟಕ ಪೊಲೀಸರ ಸಹಾಯ ಕೇಳಿದ್ದಾರೆ. ಸಂತ್ರಸ್ತರ ಹೇಳಿಕೆ ಪಡೆದಿರುವ 9 ಜನರ ಕರ್ನಾಟಕ ಪೊಲೀಸ್ ತಂಡ ಗುಲ್ಬರ್ಗಾದಲ್ಲಿನ ಕೋರ್ಟ್ ಗೆ ವರದಿ ಸಲ್ಲಿಸಿದೆ.