ಸಿಎಂ ಡೈಮಂಡ್ ವಾಚ್ ಸರ್ಕಾರದ ಆಸ್ತಿ ಎಂದು ಘೋಷಿಸಿದ ಸ್ಪೀಕರ್

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯುಬ್ಲೋಟ್ ಡೈಮಂಡ್ ವಾಚ್ ಸರ್ಕಾರದ ಆಸ್ತಿ ಎಂದು...
ಡೈಮಂಡ್ ವಾಚ್ - ಸಿದ್ದರಾಮಯ್ಯ
ಡೈಮಂಡ್ ವಾಚ್ - ಸಿದ್ದರಾಮಯ್ಯ
ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯುಬ್ಲೋಟ್ ಡೈಮಂಡ್ ವಾಚ್ ಸರ್ಕಾರದ ಆಸ್ತಿ ಎಂದು ಬುಧವಾರ ವಿಧಾಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಘೋಷಿಸಿದ್ದಾರೆ.
ವಾಚ್ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಉಭಯ ಸದನಗಳಲ್ಲೂ ತೀವ್ರ ಗದ್ದಲ ಸೃಷ್ಟಿಸುತ್ತಿದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ಗೆಳೆಯ ಡಾ.ಗಿರೀಶ್ ಚಂದ್ರ ವರ್ಮಾ ಅವರು ಗಿಫ್ಟ್ ನೀಡಿದ್ದ ವಾಚ್ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ನೀಡಿದರು. ಸಿಎಂ ನೀಡಿದ ದಾಖಲೆ ಮತ್ತು ಸ್ಪಷ್ಟನೆಯನ್ನು ಸ್ಪೀಕರ್ ಓದಿದರು. ಬಳಿಕ ಈ ವಾಚ್ ಸದನದ ಆಸ್ತಿ ಎಂದು ಘೋಷಿಸಿದರು. ಅಲ್ಲದೆ ವಾಚ್ ಅನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೀಡುವುದಾಗಿ ತಿಳಿಸಿದರು.
ವಾಚ್ ಹಸ್ತಾಂತರದ ಬಳಿಕವೂ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಸದನದಲ್ಲಿ ಧರಣಿ ನಡೆಸಿದವು.
ಪ್ರತಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸದನವನ್ನು ನಾಳೆ ಬೆಳಗ್ಗೆ 11ಗಂಟೆಗೆ ಮುಂದೂಡಿದರು.
ನಂತರ ವಿಧಾಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೇಶ್ ಶೆಟ್ಟರ್ ಅವರು, ಆರೋಪ ಮುಚ್ಸಿ ಹಾಕಲು ಸಿಎಂ ಹೈಡ್ರಾಮ ಮಾಡುತ್ತಿದ್ದಾರೆ. ವಾಚ್ ಹಸ್ತಾಂತರಿಸಿದರೆ ವಿವಾದ ಮುಗಿಯಲ್ಲ. ಆ ಬಗ್ಗೆ ಸಿಬಿಐ ಅಥವಾ ಕೇಂದ್ರ ಸರ್ಕಾರದ ಇತರೆ ಯಾವುದೇ ಸಂಸ್ಥೆಯಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com