ರವಿಶಂಕರ್‌ ಗುರೂಜಿ
ರವಿಶಂಕರ್‌ ಗುರೂಜಿ

ವಿಶ್ವ ಸಾಂಸ್ಕೃತಿಕ ಉತ್ಸವ: ಪರಿಸರ ಅನುಮತಿ ಕುರಿತು ಕೇಂದ್ರವನ್ನು ಪ್ರಶ್ನಿಸಿದ ಎನ್ ಜಿಟಿ

ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ 'ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ಆಯೋಜಿಸಿರುವ 'ವಿಶ್ವ ಸಾಂಸ್ಕೃತಿಕ ಉತ್ಸವ'ಕ್ಕೆ...
Published on
ನವದೆಹಲಿ: ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ 'ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ಆಯೋಜಿಸಿರುವ 'ವಿಶ್ವ ಸಾಂಸ್ಕೃತಿಕ ಉತ್ಸವ'ಕ್ಕೆ ಮಂಗಳವಾರ ಮತ್ತೊಂದು ಹಿನ್ನಡೆಯಾಗಿದೆ. ಪರಿಸರ ಅನುಮತಿ ಪಡೆಯುವ ಅಗತ್ಯ ಏಕೆ ಇರಲಿಲ್ಲ ಎನ್ನುವುದರ ಕುರಿತು ಸ್ಪಷ್ಟೀಕರಣ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ವಿಶ್ವ ಸಾಂಸ್ಕೃತಿಕ ಉತ್ಸವಕ್ಕಾಗಿ ಯುಮುನಾ ನದಿ ತೀರದಲ್ಲಿ ತಾತ್ಕಾಲಿಕ ನಿರ್ಮಾಣ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಪರಿಸರ ಅನುಮತಿ ಪಡೆಯುವ ಅಗತ್ಯ ಏಕೆ ಇರಲಿಲ್ಲ ಎನ್ನುವುದರ ಕುರಿತು ವಿವರಣೆ ನೀಡುವಂತೆ ಮತ್ತು ಈ ಕುರಿತು ಬುಧವಾರ ಅಫಿಡವಿಟ್‌ ಸಲ್ಲಿಸುವಂತೆ ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ನೇತೃತ್ವದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸರ್ಕಾರಕ್ಕೆ ತಾಕೀತು ಮಾಡಿದೆ.
ಪರಿಸರ ಮತ್ತು ಅರಣ್ಯ ಸಚಿವಾಲಯ ಪರವಾಗಿ ಹಾಜರಾದ ತಜ್ಞರ ಸಮಿತಿ, ಕಾರ್ಯಕ್ರಮ ಆಯೋಜಿಸಿರುವ ಸ್ಥಳದಲ್ಲಿ ಯಾವುದೇ ಭಗ್ನಾವಶೇಷಗಳು, ಕಸಕಡ್ಡಿಗಳು ಬಿದ್ದಿಲ್ಲ ಮತ್ತು 2006ರ ಪರಿಸರ ಪರಿಣಾಮ ನಿರ್ಧಾರಣ ಅಧಿಸೂಚನೆ ಅನ್ವಯ ಇಂತಹ ತಾತ್ಕಾಲಿಕ ನಿರ್ಮಾಣಗಳಿಗೆ ಪರಿಸರ ಅನುಮತಿ ಬೇಕಿಲ್ಲ ಎಂದು ಹೇಳಿತು.ಇದನ್ನು ಗಂಭೀರವಾಗಿ ಪರಿಗಣಿಸಿದ ‘ಎನ್‌ಜಿಟಿ’ ಯಾಕೆ ಅನುಮತಿ ಬೇಕಿಲ್ಲ? ವಿವರಣೆ  ನೀಡಿ ಎಂದು ಸೂಚಿಸಿತು.
ಕಾರ್ಯಕ್ರಮದ ಭಾಗವಾಗಿ  ಯೋಧರು ನದಿಗೆ ಅಡ್ಡವಾಗಿ ಎರಡು ಸೇತುವೆ ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಲ್ಲದೆ, ಲೋಕೋಪಯೋಗಿ ಇಲಾಖೆ ಒಂದು ಸೇತುವೆ ನಿರ್ಮಿಸಲಿದೆ. ಇದಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಪೀಠ ಪ್ರಶ್ನಿಸಿತು.
ಈ ಮಧ್ಯೆ, ಕಾರ್ಯಕ್ರಮಕ್ಕೆ ತನ್ನಿಂದ ಯಾವುದೇ ಪೊಲೀಸ್ ಅನುಮತಿಯಾಗಲಿ ಅಥವಾ ಅಗ್ನಿ ಸುರಕ್ಷತಾ ಅನುಮತಿಯಾಗಲಿ ಪಡೆದಿಲ್ಲ ಎಂದು ದೆಹಲಿ ಸರ್ಕಾರ ಹರಿಸ ನ್ಯಾಯಾಲಯಕ್ಕೆ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾ.11ರಿಂದ 13ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಯಮುನಾ ದಂಡೆಯ ಮೇಲೆ ಬೃಹತ್‌ ವೇದಿಕೆ ಸಿದ್ಧಪಡಿಸಿದ್ದು, ಟೆಂಟ್‌ ಮತ್ತು ರಸ್ತೆಗಳನ್ನು ನಿರ್ಮಾಣಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com