ಬೆಂಗಳೂರು/ಕೊಚಿ: ಮೇ ೧೬ ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಸ್ಫರ್ದಿಸಲು ಬಿಜೆಪಿ ತಮಗೆ ಟಿಕೆಟ್ ನೀಡಲು ಮುಂದಾಗಿದೆ ಎಂದು ಭಾರತೀಯ ಕ್ರಿಕೆಟ್ ನ ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್ ಹೇಳಿದ್ದಾರೆ.
೧೪೦ ಸದಸ್ಯರ ಕೇರಳ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ ಇನ್ನೂ ಖಾತೆ ತೆರಯಬೇಕಿದೆ.
"ನಾನು ನನ್ನ ಸ್ಪರ್ಧೆಯನ್ನು ನಾಳೆ(ಬುಧವಾರ) ಘೋಷಿಸಲಿದ್ದೇನೆ. ಎರ್ನಾಕುಲಂ ಅಥವಾ ತ್ರಿಪುನಿತುರಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನನಗೆ ಕರೆ ಬಂದಿದೆ. ನಾನು ತ್ರಿಪುನಿತುರಾದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದೇನೆ" ಎಂದು ಶ್ರೀಶಾಂತ್ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾವು ಎಡಚಿಂತನೆಗಳುಳ್ಳ ಕುಟುಂಬದಿಂದ ಬಂದಿದ್ದರೂ ತಮ್ಮ ಪತ್ನಿಯ ಕುಟುಂಬ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತದೆ ಎಂದು ಘೋಷಿಸಿದ್ದಾರೆ.
೨೦೧೩ರ ಐಪಿಲ್ ಕ್ರಿಕೆಟ್ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಬಿಸಿಸಿಐ ಶ್ರೀಶಾಂತ್ ಅವರನ್ನು ಕ್ರಿಕೆಟ್ ಆಟಕ್ಕೆ ನಿಷೇಧ ಹೇರಿತ್ತು ಹಾಗೂ ಆರೋಪಗಳನ್ನು ಎದುರಿಸುತ್ತಿರುವ ಶ್ರೀಶಾಂತ್ ತಿಹಾರ್ ಜೈಲಿನಲ್ಲಿ ಕೂಡ ಕೆಲ ಕಾಲ ಸೆರೆವಾಸ ಅನುಭವಿಸಿದ್ದರು.
ಜುಲೈ ೨೦೧೫ ರಲ್ಲಿ ಪಟಿಯಾಲ ಹೌಸ್ ಕೋರ್ಟ್ ಇವರು ಮತ್ತು ಇತರ ಇಬ್ಬರು ಆಟಗಾರನ್ನು ನಿರ್ದೋಷಿಗಳು ಎಂದು ಘೋಷಿಸಿತ್ತು. ಆದರೆ ದೆಹಲಿ ಪೊಲೀಸರು ಈ ತೀರ್ಪಿನ ವಿರುದ್ಧ ಮೊರೆ ಹೋಗಿದ್ದಾರೆ.
ಶ್ರೀಶಾಂತ್ ಪೋಷಕರು ಎರ್ನಾಕುಲಂನಲ್ಲಿ ವಾಸವಾಗಿದ್ದಾರೆ, ಶ್ರೀಶಾಂತ್ ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ಒಡಾಡುತ್ತಿರುತ್ತಾರೆ.
Advertisement