ನವದೆಹಲಿ: ಜನವರಿಯಲ್ಲಿ ಭಾರತದ ಪಠಾನ್ ಕೋಟ್ ನ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ತನಿಖೆ ನಡೆಸಲು, ಪಾಕಿಸ್ತಾನದ ತನಿಖಾದಳಕ್ಕೆ ಅವಕಾಶ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿರುವ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಶರಣಾಗಿದ್ದಾರೆ ಎಂದು ಸೋಮವಾರ ಟೀಕಿಸಿದ್ದಾರೆ.
ಪಾಕಿಸ್ತಾನ ಭಾರತದ ವಿರುದ್ಧದ ಭಯೋತ್ಪಾದಕರಿಗೆ ನೆಲೆ ನೀಡಿದೆ ಮತ್ತು ಈಗ ಅವರೇ ಪ್ರಾಯೋಜಿಸಿರುವ ಭಯೋತ್ಪಾದನೆಯನ್ನು ತನಿಖೆ ಮಾಡಲು ಪಾಕಿಸ್ತಾನದ ಭದ್ರತಾ ಮತ್ತು ಬೇಹುಗಾರಿಕಾ ದಳಕ್ಕೆ ಅವಕಾಶ ಕೊಟ್ಟಿರುವುದು ಹೇಗೆ ಎಂದು ಕೇಜ್ರಿವಾಲ್ ಮಾಧ್ಯಮಗಳ ಮುಂದೆ ಪ್ರಶ್ನಿಸಿದ್ದಾರೆ.
"ಐ ಎಸ್ ಐ (ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ) ಈ ದಾಳಿಗೆ ಕಾರಣ ಎಂದು ಹೇಳುತ್ತಿದ್ದೇವೆ. ಇದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ. ಈಗ ಈ ನಿಲುವು ಬದಲಾಗಿರುವುದು ಹೇಗೆ?" ಎಂದು ಪ್ರಶ್ನಿಸಿರುವ ಆಮ್ ಆದ್ಮಿ ಪಕ್ಷದ ಅಧ್ಯಕ್ಷ "ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಶರಣಾಗಿದ್ದಾರೆ" ಎಂದಿದ್ದಾರೆ.
ಜನವರಿ ೨ ರಂದು ನಡೆದ ದಾಳಿಯ ತನಿಖೆ ನಡೆಸಲು ಪಾಕಿಸ್ತಾನ ತಂಡ ಭಾರತಕ್ಕೆ ಬಂದಿಳಿದಿದೆ. ಈ ದಾಳಿಯಲ್ಲಿ ಭಾರತದ ಏಳು ಭದ್ರತಾ ಸಿಬ್ಬಂದಿ ಮತ್ತು ದಾಳಿ ಮಾಡಿದ ಭಯೋತ್ಪಾದಕರು ಮೃತರಾಗಿದ್ದರು.
Advertisement