3 ವರ್ಷದ ಅವಧಿಯಲ್ಲಿ ಕಳಂಕ ರಹಿತ ಆಡಳಿತ ನೀಡಿದ್ದೇವೆ: ಸಿಎಂ ಸಿದ್ದರಾಮಯ್ಯ

ಮೂರು ವರ್ಷಗಳ ಕಾಲ ರಾಜ್ಯದ ಜನರ ಪರ ಬದ್ಧತೆಯಿಂದ ಕೆಲಸ ಮಾಡಿದ್ದೇವೆ ಮತ್ತು ಕಳಂಕ ರಹಿತ ಆಡಳಿತ ನೀಡಿದ್ದೇವೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಮೂರು ವರ್ಷಗಳ ಕಾಲ ರಾಜ್ಯದ ಜನರ ಪರ ಬದ್ಧತೆಯಿಂದ ಕೆಲಸ ಮಾಡಿದ್ದೇವೆ ಮತ್ತು ಕಳಂಕ ರಹಿತ ಆಡಳಿತ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೆಲ ರಾಜಕೀಯ ಲೆಕ್ಕಾಚಾರದ ಆರೋಪ ಹೊರತುಪಡಿಸಿದರೆ, ನಾವು ಕಳಂಕ ಮುಕ್ತ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ಕಳೆದ ಮೂರು ವರ್ಷದ ಅವಧಿಯಲ್ಲಿ ನುಡಿದಂತೆ ನಡೆದಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು. ಅಲ್ಲದೆ ಮುಂದಿನ ಎರಡು ಬಜೆಟ್ ನಲ್ಲಿ ಉಳಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.
ನಮ್ಮ ಸರ್ಕಾರದ ಯೋಜನೆಗಳು ಎಲ್ಲಾ ಜನರ ಪರವಾಗಿವೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ರಾಜಕೀಯ ಲೆಕ್ಕಾಚಾರ ಭದ್ರಗೊಳಿಸಿಕೊಳ್ಳಲು ಅಹಿಂದ ಪರ ಎಂದು ಅಪಪ್ರಚಾರ ಮಾಡುತ್ತಿವೆ ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಸಿಎಂ ತೀವ್ರ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಅಹಿಂದ ವರ್ಗಕ್ಕೆ ಸೀಮಿತವೆಂಬ ಹಣೆಪಟ್ಟಿ ಕಟ್ಟುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಕಾಮಾಲೆ ಕಣ್ಣಿನಿಂದ ನೋಡುವವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತೆ. ನನ್ನ ವಾಚ್ ವಿಚಾರವನ್ನು ಕಳಂಕ ಎಂಬಂತೆ ಬಿಂಬಿಸಿದರು. ಆದರೆ ನನ್ನ ಗೆಳೆಯ ನನಗೆ ವಾಚ್ ಕೊಟ್ಟಾಗ ಹೀಗಾಗುತ್ತೆ ಎಂದು ಗೊತ್ತಿರಲಿಲ್ಲ ಎಂದು ಸಿಎಂ ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಅನ್ನೋ ಪ್ರತಿಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದ ಸಿಎಂ, ರಾಜ್ಯದಲ್ಲಿ ಭೀಕರ ಬರ ಇರುವುದರಿಂದ, ಸರ್ಕಾರ ಮೂರು ವರ್ಷ ಪೂರೈಸಿದ್ದಕಾಗಿ ಸಾಧನಾ ಸಮಾವೇಶ ಮಾಡುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com