'ಮಾಸ್ತಿ ಗುಡಿ' ದುರಂತ, ನಟ ಉದಯ್ ಶವ ಪತ್ತೆ, ಅನಿಲ್ ದೇಹಕ್ಕಾಗಿ ಮುಂದುವರೆದ ಕಾರ್ಯಾಚರಣೆ

ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರವಾಗಿದ್ದ ಇಬ್ಬರು...
ಮೃತ ನಟ ಉದಯ್
ಮೃತ ನಟ ಉದಯ್
ಬೆಂಗಳೂರು: ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರವಾಗಿದ್ದ ಇಬ್ಬರು ಖಳನಟರ ಪೈಕಿ ಬುಧವಾರ ಓರ್ವ ನಟ ರಾಘವ್ ಉದಯ್ ಅವರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ನಟ ಅನಿಲ್ ದೇಹಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ.
ಕಳೆದ ಸೋಮವಾರ ಮಧ್ಯಾಹ್ನ ನೀರುಪಾಲಾಗಿದ್ದ ಉದಯ್ ಅವರ ಶವ ಇಂದು ಪತ್ತೆಯಾಗಿದ್ದು, ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತಿದೆ. ಇನ್ನು ಮರಣೋತ್ತರ ಪರೀಕ್ಷೆಯ ನಂತರ ಉದಯ್ ಮನೆಗೆ ಶವ ಸಾಗಿಸಲಾಗುವುದು. ಮುಂದಿನ ವಿಧಿವಿಧಾನಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿರುವ ದುನಿಯಾ ವಿಜಯ್ ಅವರು ಮತ್ತೊಬ್ಬ ನಟ ಅನಿಲ್ ಶವ ಸಿಗುವವರೆಗೂ ಟೆನ್ಷನ್ ಇದ್ದೆ ಇರುತ್ತೆ ಎಂದು ಹೇಳಿದ್ದಾರೆ.
ಹೆಲಿಕಾಪ್ಟರ್ ನಿಂದ ನೀರಿಗೆ ಜಿಗಿದಿದ್ದ ಸ್ಥಳದಿಂದ 20 ಮೀಟರ್ ದೂರದಲ್ಲಿ ಉದಯ್ ಅವರ ಶವ ತೇಲಿಬಂದಿದ್ದು, ಅದನ್ನು ರಕ್ಷಣಾ ಸಿಬ್ಬಂದಿ ದಡಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗು ತಜ್ಞರು, ಅಗ್ನಿಶಾಮಕ ಪಡೆ, ಎನ್ ಡಿಆರ್ ಎಫ್ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com