ಬೆಳಗಾವಿ: 500 ಮತ್ತು 1000 ರು.ನೋಟುಗಳನ್ನು ನಿಷೇಧಿಸುವ ಮೂಲಕ ಕಪ್ಪುಹಣದ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದ ಪ್ರಧಾನಿ ಮೋದಿ ಇದೀಗ ತಮ್ಮ ಮುಂದಿನ ಗುರಿ ಬೇನಾಮಿ ಆಸ್ತಿ ಎಂದು ಹೇಳುವ ಮೂಲಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಪ್ಪುಹಣ ತೊಡಗಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಕೆಎಲ್ ಇ ವಿದ್ಯಾಸಂಸ್ಥೆಯ ಶತಮಾನೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ದೇಶದ ಸ್ವಾತಂತ್ರ್ಯದ ಬಳಿಕದ ಎಲ್ಲಾ ಕಳ್ಳ ಹಣದ ಲೆಕ್ಕವನ್ನು ಹೊರಗೆಳೆಯುತ್ತೇನೆ. ಇದಕ್ಕಾಗಿ ನಾನು ಒಂದು ಲಕ್ಷ ಜನರನ್ನು ನೇಮಿಸಿಕೊಳ್ಳಲು ಸಿದ್ಧ. ಇದು ಎಂಥಾ ಅಪಾಯಕಾರಿ ಕೆಲಸ, ನಾನು ಎಂಥವರನ್ನು ಎದುರು ಹಾಕಿಕೊಂಡಿದ್ದೇನೆ ಎಂಬುದು ನನಗೂ ತಿಳಿದಿದೆ. ಆದರೆ ಒಮ್ಮೆ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿದರೆ "ಸೊಳ್ಳೆ"ಗಳು ಹತ್ತಿರ ಸುಳಿಯುವುದಿಲ್ಲ ಎಂಬುದು ನನ್ನ ನಂಬಿಕೆ ಎಂದು ಹೇಳಿದರು.
ಇದೇ ವೇಳೆ ತಮ್ಮ ಮುಂದಿನ ಗುರಿ ಬೇನಾಮಿ ಆಸ್ತಿ ಎಂದು ಸುಳಿವು ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ಭ್ರಷ್ಟಾಚಾರ ನಿರ್ಮೂಲನಾ ದೇಶ ಮಾಡುವ ನಿಟ್ಟಿನಲ್ಲಿ ನನ್ನ ತಲೆಯಲ್ಲಿ ಸಾಕಷ್ಟು ಯೋಜನೆಗಳಿವೆ. ಶೀಘ್ರದಲ್ಲೇ ಬೇನಾಮಿ ಆಸ್ತಿದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಕಳ್ಳ ಆಸ್ತಿಗಳ ಲೆಕ್ಕ ಶೀಘ್ರದಲ್ಲೇ ಪಕ್ಕಾ ಆಗಲಿದೆ ಎಂದು ಹೇಳುವ ಮೂಲಕ ಬೇನಾಮಿ ಆಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
Advertisement