ಎಚ್ ಕೆ ಪಾಟೀಲ್
ಪ್ರಧಾನ ಸುದ್ದಿ
ಪಂಚಾಯ್ತಿ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಕೇಸ್: ಎಚ್.ಕೆ. ಪಾಟೀಲ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ 10 ಸಾವಿರ ಕೋಟಿ ರುಪಾಯಿ ಅಕ್ರಮ ವಹಿವಾಟು....
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ 10 ಸಾವಿರ ಕೋಟಿ ರುಪಾಯಿ ಅಕ್ರಮ ವಹಿವಾಟು ನಡೆದಿದ್ದು, ಹಗರಣದಲ್ಲಿ ಭಾಗಿಯಾದವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಶುಕ್ರವಾರ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಇಲಾಖೆಯಲ್ಲಿ "ಕಳ್ಳ ಠೇವಣಿ' ಪ್ರಕರಣ ಬೆಳಕಿಗೆ ಬಂದ ಮೇಲೆ ಅದರ ತನಿಖೆ ನಡೆಸಲು ಐಎಎಸ್ ಅಧಿಕಾರಿ ಪುನಟಿ ಶ್ರೀಧರ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ವರದಿಯ ಆಧಾರದಲ್ಲಿ ಲೆಕ್ಕಪರಿಶೋಧನೆ ಕೈಗೊಳ್ಳಲು ರಾಜ್ಯ ಲೆಕ್ಕಪತ್ರ ಇಲಾಖೆಯ ಅಪರ ನಿರ್ದೇಶಕ ಬಿ.ಎನ್. ಶಿವರುದ್ರಪ್ಪ ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು. ಇದೀಗ ಶಿವರುದ್ರಪ್ಪ ಸಮಿತಿಯು ವರದಿ ನೀಡಿದ್ದು, ಅದರಂತೆ ಇಲಾಖೆಯಲ್ಲಿ 2009 ರಿಂದ 2013-14ನೇ ಅವಧಿಯಲ್ಲಿ 106 ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ 10 ಸಾವಿರ ಕೋಟಿ ರು. ಅಕ್ರಮ ವಹಿವಾಟು ನಡೆದಿರುವುದು ಪುರಾವೆಗಳ ಸಮೇತ ಸಾಬೀತಾಗಿದೆ ಎಂದರು.
ಪುನಟಿ ಶ್ರೀಧರ್ ಸಮಿತಿಯ ವರದಿಯ ಎಲ್ಲ ಅಂಶಗಳನ್ನು ಶಿವರುದ್ರಪ್ಪ ಸಮಿತಿ ದೃಢಪಡಿಸಿದೆ. ವರದಿ ಪ್ರಕಾರ 2009 ರಿಂದ 2013 14ರ ಅವಧಿಯಲ್ಲಿ ಇಲಾಖೆಯಲ್ಲಿ ಗಂಭೀರ ಸ್ವರೂಪದ ಆರ್ಥಿಕ ಆಶಿಸ್ತು ನಡೆದಿದೆ. ಈಗ ಸಮಿತಿಯ ಶಿಫಾರಸಿನಂತೆ ಕರ್ನಾಟಕ ರಾಜ್ಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆಯ ಅಂದಿನ (2009-14) ನಿರ್ದೇಶಕ ನಿವೃತ್ತ ಐಎಎಸ್ ಅಧಿಕಾರಿ ಡಾ. ಪಿ. ಬೋರೇಗೌಡ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಆಗ ಉಪ ಕಾರ್ಯದರ್ಶಿ ಆಗಿದ್ದ ರಾಮಕೃಷ್ಣ, ಸಿಂಡಿಕೇಟ್ ಬ್ಯಾಂಕ್ ಮತ್ತು ಟಿ.ಎಸ್. ಗಿರಿ ಆ್ಯಂಡ್ ಅಸೋಸಿಯೇಟ್ಸ್ ಲೆಕ್ಕ ಪರಿಶೋಧನಾ ಸಂಸ್ಥೆ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅದೇ ರೀತಿ ಶಿವರುದ್ರಪ್ಪ ಸಮಿತಿ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಎಲ್ಲ ಖಾತೆಗಳು ಮತ್ತು ವಹಿವಾಟುಗಳ ಮರು ಪರಿಶೀಲನೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ರಾಜ್ಯ ಸಾರ್ವಜನಿಕ ಲೆಕ್ಕಪರಿಶೋಧನಾ ಸಂಸ್ಥೆ (ಕೆಐಪಿಎ) ಅವರಿಗೆ ನಿರ್ದೇಶನ ನೀಡಲಾಗಿದೆ. ಈ ಪ್ರಕರಣ ನಿರ್ವಹಿಸಲು ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಸಿದ್ದೇಶ್ ಪೋತಲಕಟ್ಟಿ ಹಾಗೂ ರಂಗನಗೌಡ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು ಎಂದು ಅವರು ತಿಳಿಸಿದರು.

