ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಪರ ಗೂಢಚಾರಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಭಾರತೀಯ ಸೇನೆ ಅಧಿಕಾರಿಗಳು ಬಂಧಿಸಿದ್ದಾರೆ.
ಕಣಿವೆ ರಾಜ್ಯ ಸಾಂಬಾ ಸೆಕ್ಟರ್ ನಲ್ಲಿ ನಿನ್ನೆ ತಡರಾತ್ರಿಯಲ್ಲಿ ಬೋಧ್ ರಾಜ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಪಾಕಿಸ್ತಾನ ಪರ ಭಾರತೀಯ ಗಡಿಯಲ್ಲಿ ಗೂಢಚಾರಿಕೆ ಮಾಡುತ್ತಿರುವ ಕುರಿತು ಸೇನಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಬಂಧನ ವೇಳೆ ಈತನ ಬಳಿ ಪಾಕಿಸ್ತಾನದ 2 ಸಿಮ್ ಕಾರ್ಡ್ ಗಳು ಹಾಗೂ ಭಾರತೀಯ ಸೇನಾ ಪೋಸ್ಟ್ ಗಳ ಮ್ಯಾಪ್ ಪತ್ತೆಯಾಗಿದೆ.
ಸೇನಾ ಮೂಲಗಳ ಪ್ರಕಾರ ಬಂಧಿತ ಬೋಧ್ ರಾಜ್ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಪ್ರದೇಶದ ನಿವಾಸಿಯೆಂದು ತಿಳಿದುಬಂದಿದ್ದು, ಪ್ರಸ್ತುತ ಈತನನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಈ ಹಿಂದೆಯೂ ಕೂಡ ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ರಾಜಸ್ತಾನದಲ್ಲಿ ಓರ್ವ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತನ ಬಳಿ ಭಾರತೀಯ ಸೇನಾ ಗಡಿಗಳ ಫೋಟೋಗಳು ಹಾಗೂ ಮ್ಯಾಪ್ ಗಳ ಪತ್ತೆಯಾಗಿದ್ದವು.
ಯೋಧರ ಸಾವು ನಿರಾಕರಿಸಿದ ಪಾಕ್ ಸೇನೆ
ಇದೇ ವೇಳೆ ನಿನ್ನೆ ಹಿರಾನಗರ ಸೆಕ್ಟರ್ ನಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದ ಭಾರತ ಪ್ರತಿದಾಳಿ ನಡೆಸಿತ್ತು. ಈ ವೇಳೆ 7 ಮಂದಿ ಪಾಕಿಸ್ತಾನ ಯೋಧರು ಮೃತರಾಗಿದ್ದರು. ಆದರೆ ಈ ಸುದ್ದಿಯನ್ನು ಪಾಕಿಸ್ತಾನ ಸೇನೆ ತಳ್ಳಿಹಾಕಿದೆ. ಪಾಕಿಸ್ತಾನ ಸೇನಾವಲಯದಿಂದ ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿಲ್ಲ ಎಂದು ಹೇಳಿದೆ.
Advertisement