ಇಸ್ಲಮಾಬಾದ್: ದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಗಳನ್ನು ಬೇಹುಗಾರಿಕೆ ಚಟುವಟಿಕೆ ಆರೋಪದ ಮೇಲೆ ವಶಪಡಿಸಿಕೊಂಡು ವಿಚಾರಣೆ ನಡೆಸಿ, ಅವರಿಗೆ ಭಾರತ ತೊರೆಯುವಂತೆ ಆದೇಶಿಸಿರುವ ಕ್ರಮವನ್ನು ಗುರುವಾರ ಪಾಕಿಸ್ತಾನ ಖಂಡಿಸಿದೆ.
"ಸುಳ್ಳು ಮತ್ತು ಯಾವುದೇ ಸಾಕ್ಷ್ಯಾಧಾರಗಳಿಲ್ಲದ" ಗೂಢಾಚಾರ್ಯದ ಆರೋಪದ ಮೇಲೆ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಬಂಧಿಸಿ ಶನಿವಾರದ ಒಳಗೆ ದೇಶ ತೊರೆಯುವಂತೆ ಆದೇಶಿಸಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಾರ್ಯಗಳ ಸಚಿವಾಲಯ ಹೇಳಿದೆ.
"ನಮ್ಮ ರಾಯಭಾರ ಅಧುಕಾರಿಯ ವಶ ಮತ್ತು ಅವರ ವಿರುದ್ಧ ಒರಟು ವರ್ತನೆಯನ್ನು ನಾವು ಖಂಡಿಸುತ್ತೇವೆ" ಎಂದು ಹೇಳಿಕೆ ತಿಳಿಸಿದೆ.
ನಮ್ಮ ಸಿಬ್ಬಂದಿ ಐ ಎಸ್ ಐ ರ್ಯಾಕೆಟ್ ನಡೆಸಿ ಭಾರತದ ರಕ್ಷಣಾ ಇಲಾಖೆಯ ಸೂಕ್ಷ್ಮ ದಾಖಲೆಗಳನ್ನು ಕಲೆಹಾಕುತ್ತಿದ್ದ ಎಂಬ ಭಾರತದ ಆರೋಪವನ್ನು ನಿರಾಕರಿಸುತ್ತೇವೆ ಎಂದು ಕೂಡ ಹೇಳಲಾಗಿದೆ.
"ಪಾಕಿಸ್ತಾನ ರಾಯಭಾರ ಕಚೇರಿ ಕೆಲಸ ಮಾಡುವ ರಾಜತಾಂತ್ರಿಕ ಕ್ಷೇತ್ರವನ್ನು ಸಣ್ಣದು ಮಾಡುವ ಭಾರತದ ಕ್ರಮಗಳನ್ನು ಇದು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ" ಎಂದು ಕೂಡ ಹೇಳಿಕೆ ತಿಳಿಸಿದೆ.