ಭೋಪಾಲ್: ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ನಿಷೇಧಿತ ಸಿಮಿ ಸಂಘಟನೆಯ 8 ಮಂದಿ ಉಗ್ರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಕಳೆದ ತಡರಾತ್ರಿಯಲ್ಲಿ ಉಗ್ರರು ಜೈಲಿನ ಭದ್ರತಾ ಸಿಬ್ಬಂದಿಯನ್ನು ಕೊಂದು, ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಪರಾರಿಯಾಗಿರುವ ಎಲ್ಲ ಉಗ್ರರು 1977 ಏಪ್ರಿಲ್ ನಲ್ಲಿ ಭಾರತದಿಂದ ನಿಷೇಧಕ್ಕೆ ಒಳಪಟ್ಟಿದ್ದ ಸ್ಟೂಡೆಂಟ್ಸ್ ಆಫ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಗೆ ಸೇರಿದ ಉಗ್ರರು ಎಂದು ತಿಳಿದುಬಂದಿದೆ.
ಭೋಪಾಲ್ ಸೆಂಟ್ರಲ್ ಜೈಲ್ ನಲ್ಲಿ ಭಾನುವಾರ ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದ ರಮಾಶಂಕರ್ ಎಂಬ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ನನ್ನು ಚಾಕುವಿನಿಂದ ಇರಿದು ಉಗ್ರರು ಕೊಂದಿದ್ದು, ತಮ್ಮ ಬಳಿ ಇದ್ದ ಬೆಡ್ ಶೀಟ್ ಅನ್ನು ಹಗ್ಗದ ರೀತಿ ಉಪಯೋಗಿಸಿ ಜೈಲು ಗೋಡೆ ಹಾರಿ ಪರಾರಿಯಾಗಿದ್ದಾರೆ.
ಉಗ್ರರು ಜೈಲಿನಿಂದ ಪರಾರಿಯಾಗಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಉಗ್ರರ ಬಂಧನಕ್ಕಾಗಿ ವ್ಯಾಪಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಭೋಪಾಲ್ ನಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದೆ. ಇನ್ನು ಭೋಪಾಲ್ ಅನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆಯೂ ಖಂಡ್ವಾ ಜೈಲಿನಿಂದ ಇದೇ ಸಿಮಿ ಸಂಘಟನೆಯ 7 ಮಂದಿ ಉಗ್ರರು ಇದೇ ರೀತಿ ಜೈಲು ಗೋಡೆ ಹಾರಿ ಪರಾರಿಯಾಗಿದ್ದರು.
Advertisement