ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಾನುವಾರ ಮುಂಜಾನೆ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 18ಕ್ಕೇರಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದವರ ಪೈಕಿ ಓರ್ವ ಯೋಧ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ನಡೆದ ಭೀಕರ ಉಗ್ರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಶ್ರೀನಗರದಲ್ಲಿರುವ ಸೇನಾಸ್ಪತ್ರೆಗೆ ದಾಖಲಾಗಿದ್ದ ಸೈನಿಕರ ಪೈಕಿ ಇಂದು ಓರ್ವ ಯೋಧ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಮೃತ ಯೋಧರ ವಿವರ ಹೊರಬಿದ್ದಿಲ್ಲವಾದರೂ, ಸಾವಿನ ಸಂಖ್ಯೆ ಏರಿಕೆಯಾಗಿರುವ ಕುರಿತು ಸೇನಾ ಮೂಲಗಳು ಮಾಹಿತಿ ನೀಡಿವೆ. ಅಂತೆಯೇ ಆಸ್ಪತ್ರೆಗೆ ದಾಖಲಾಗಿರುವ ಯೋಧರ ಪೈಕಿ ಹಲವರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ನಿನ್ನೆ ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ಕಾಶ್ಮೀರದಲ್ಲಿರುವ ಉರಿ ಸೇನಾ ಕ್ಯಾಂಪ್ ಗೆ ನುಗ್ಗಿದ್ದ ನಾಲ್ಕು ಮಂದಿ ಉಗ್ರರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದರು. ತಮ್ಮೊಂದಿಗೆ ತಂದಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿಂದ ಉಗ್ರರು ಏಕಾಏಕಿ ದಾಳಿ ನಡೆಸಿದ ಪರಿಣಾಮ ನಿನ್ನೆಯೇ 17 ಮಂದಿ ಯೋಧರು ಹುತಾತ್ಮರಾಗಿದ್ದರು. ಬಹುತೇಕ ಮಂದಿ ಸೈನಿಕರು ಕ್ಯಾಂಪ್ ನಲ್ಲಿ ಬಿದ್ದ ಬೆಂಕಿಯಿಂದಾಗಿ ಸಾವನ್ನಪ್ಪಿದ್ದರು.
Advertisement