ಕಾಶ್ಮೀರದಲ್ಲಿ ಶಾಂತಿ ಕದಡಲು ಜೈಲಿನಿಂದಲೇ ಪ್ರತ್ಯೇಕತಾವಾದಿಗಳ ಸಂಚು: ಪೊಲೀಸ್ ಮಾಹಿತಿ
ಶ್ರೀನಗರ: ಒಂದೆಡೆ ಹಿಂಸಾಚಾರ ಪೀಡಿತ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಭಾರತೀಯ ಸೇನೆಯ ಯೋಧರು ಹರಸಾಹಸ ಪಡುತ್ತಿದ್ದರೆ, ಇತ್ತ ಜೈಲಿನಲ್ಲಿದ್ದುಕೊಂಡೇ ಪ್ರತ್ಯೇಕತಾವಾದಿಗಳು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಆಘಾತಕಾ ಬೆಳವಣಿಗೆ ಬೆಳಕಿಗೆ ಬಂದಿದೆ.
ಕಾಶ್ಮೀರ ಪೊಲೀಸರು ಬಾರಾಮುಲ್ಲಾದ ಜೈಲಿನಲ್ಲಿ ಬೃಹತ್ ಪ್ರತ್ಯೇಕತಾ ವಾದಿಗಳ ಜಾಲವನ್ನು ಬಯಲಿಗೆಳೆದಿದ್ದು, ಜೈಲಿನಲ್ಲಿದ್ದುಕೊಂಡೇ ಕಾಶ್ಮೀರದಲ್ಲಿ ಹಿಂಸೆಯ ವಿಷ ಬೀಜ ಬಿತ್ತುವ ಕಾರ್ಯದಲ್ಲಿ ತೊಡಗಿರುವ ವಿಚಾರವನ್ನು ಬೆಳಕಿಗೆ ತಂದಿದ್ದಾರೆ. ಬಾರಾಮುಲ್ಲಾ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಗಳನ್ನು ತರಿಸಿಕೊಂಡು, ಸ್ಥಳೀಯ ಯುವಕರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಮತ್ತು ಹಿಂಸಾಚಾರಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮತ್ತೆ ಕಣಿವೆ ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯಂತೆ ಜೈಲಿನಲ್ಲಿ ಪ್ರತ್ಯೇಕತಾವಾದಿಗಳು ಮೊಬೈಲ್ ಮೂಲಕ ಪಾಕಿಸ್ತಾನದಲ್ಲಿರುವ ಕೆಲ ಎಜೆಂಟ್ ಗಳನ್ನು ಸಂಪರ್ಕಿಸುತ್ತಿದ್ದು, ಅವರ ನಿರ್ದೇಶನದಂತೆ ಕಾಶ್ಮೀರದ ಸ್ಥಳೀಯ ಯುವಕರನ್ನು ಪ್ರಚೋದಿಸುತ್ತಿದ್ದಾರೆ. ಬಾರಾಮುಲ್ಲಾ ಜೈಲು ಸೂಪರಿಂಟೆಂಡ್ ಇಮ್ತಿಯಾಜ್ ಹುಸ್ಸೇನ್ ಅವರು ನೀಡಿರುವ ಮಾಹಿತಿಯಂತೆ ಜೈಲಿನಲ್ಲಿದ್ದ ಬೃಹತ್ ಪ್ರತ್ಯೇಕತಾ ವಾದಿಗಳ ಜಾಲವನ್ನು ಬೇದಿಸಿದ್ದು, ಅವರ ಬಳಿಯಿದ್ದ ಸುಮಾರು 15ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅಂತೆಯೇ ಮೊಬೈಲ್ ಗಳಲ್ಲಿರುವ ಡಾಟಾಗಳನ್ನು ಪರಿಶೀಲಿಸಿದ್ದು, ಡಾಟಾಗಳ ಪೈಕಿ ಬಹುತೇಕ ಅಂಶಗಳು ಕಾಶ್ಮೀರದಲ್ಲಿ ಶಾಂತಿ ಕದಡುವ ಕುರಿತು ಪಾಕಿಸ್ತಾನದ ಏಜೆಂಟ್ ಗಳೊಂದಿಗೆ ನಡೆಸಿದ ಸಂಭಾಷಣೆಗಳಾಗಿವೆ. ಮೊಬೈಲ್ ನಲ್ಲಿನ ವಾಟ್ಸಪ್ ಕರೆಗಳನ್ನು ಕೂಡ ಪೊಲೀಸರು ಟ್ರೇಸ್ ಮಾಡಿದ್ದು, ಈ ಕರೆಗಳು ಪಾಕಿಸ್ತಾನದ ಕೆಲ ಏಜೆಂಟ್ ಗಳಿಗೆ ಮಾಡಿರುವ ಕರೆಗಳಾಗಿವೆ.
2010ರ ಕಾಶ್ಮೀರ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾದ ಮಸರತ್ ಅಲಂ ಮತ್ತು ಆತನ ಚೇಲಾಗಳಿಂದ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಮ್ತಿಯಾಜ್ ಹುಸ್ಸೇನ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ