ಆಗ್ರಾ: ಗುರುವಾರ ಬೆಳಗ್ಗೆ ದುಷ್ಕರ್ಮಿಗಳು ಉತ್ತರಪ್ರದೇಶದ ಪೊಲೀಸ್ ಪೇದೆಯೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇತೀಚೆಗಷ್ಟೇ ವಿಸರ್ಜಿಸಲಾಗಿದ್ದ ವಿಶೇಷ ಕಾರ್ಯಾಚರಣೆ ಪಡೆ (ಎಸ್ ಒ ಜಿ) ಯಲ್ಲಿ ಈ ಮೃತ ಪೊಲೀಸ್ ಪೇದೆ ಕೆಲಸ ಮಾಡುತ್ತಿದ್ದರು. ಎಸ್ ಒ ಜಿ ಹಲವು ಗಂಭೀರ ಅಪರಾಧಗಳನ್ನು ತನಿಖೆ ಮಾಡುತ್ತಿತ್ತು.
ಪೊಲೀಸ್ ಪೇದೆ ಅಲೋಕ್ ಯಾದವ್ ಗಸ್ತಿನ ಮೇಲೆ ಹೊರಗಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರನ್ನು ಶಂಷಾಬಾದ್ ನಲ್ಲಿ ಅಡ್ಡಗಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅವರನ್ನು ಗಂಭೀರ ಪರಿಸ್ಥಿಯಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆಯ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವೈಯಕ್ತಿಕ ದ್ವೇಷದಿಂದ ಸರ್ಕಲ್ ಆಫೀಸರ್ ಅಶೋಕ್ ಕುಮಾರ್ ಈ ಕೊಲೆ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಮೃತ ಪೇದೆಯ ಕುಟುಂಬವರ್ಗ ಆರೋಪಿಸಿದೆ.
ಈ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಇಂತಹುದೇ ಒಂದು ಅಪರಾಧದಲ್ಲಿ ಬುಧವಾರ ಮುಜಾಫರ್ ನಗರದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿ ಸದಸ್ಯ ರಾಜ ವಾಲ್ಮೀಕಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.