ನವದೆಹಲಿ: ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರಾಜೇಂದ್ರ ಸದಾಶಿವ್ ನಿಖಲ್ಜೆ ಅಲಿಯಾಸ್ ಛೋಟಾ ರಾಜನ್ ಹಾಗೂ ಇತರರು ತಪ್ಪಿತಸ್ಥರು ಎಂದು ದೆಹಲಿ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ವಿರೇಂದ್ರ ಕುಮಾರ್ ಗೋಯಲ್ ಅವರು, ಛೋಟಾ ರಾಜನ್ ಹಾಗೂ ನಕಲಿ ಪಾಸ್ ಪೋರ್ಟ್ ನೀಡಿದ ಮೂವರು ಪಾಸ್ ಪೋರ್ಟ್ ಅಧಿಕಾರಿಗಳ ಅಪರಾಧಿಗಳೆಂದು ಘೋಷಿಸಿದ್ದಾರೆ. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದಾರೆ.
ಜುಲೈ 11ರಿಂದ ದಿನ ಬಿಟ್ಟು ದಿನ ನ್ಯಾಯಾಲಯ ಛೋಟಾ ರಾಜನ್ ಮತ್ತು ಇತರ ಮೂವರು ನಿವೃತ್ತ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಾಹಟೆ, ದೀಪಕ್ ನಟವರ್ಲಾಲ್, ಲಲಿತಾ ಲಕ್ಷ್ಮಣನ್ ಅವರ ವಿಚಾರಣೆ ನಡೆಸಿತ್ತು.
ನಾಲ್ವರು ಅರೋಪಿಗಳ ವಿರುದ್ಧ ವಂಚನೆ (ಐಪಿಸಿ 420), ಪೋರ್ಜರಿ (ಐಪಿಸಿ 471), ನಕಲಿ ದಾಖಲೆಪತ್ರಗಳ ಸೃಷ್ಟಿ (ಐಪಿಸಿ 468), ಖಜಾನೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಇಲ್ಲವೆ ತೆಗೆಯುವುದು (467), ಅಪರಾಧಕ್ಕೆ ಸಂಚು ರೂಪಿಸುವುದು (ಐಪಿಸಿ 120 ಬಿ) ಮತ್ತು ಪಾಸ್ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣ ನಡೆದಿದ್ದು 90ರ ದಶಕದಲ್ಲಿ. ಆಗ, ಛೋಟಾ ರಾಜನ್ ಅವರಿಗೆ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ ಪೋರ್ಟ್ ನೀಡಲಾಗಿತ್ತು. ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವಾರು ದೇಶಗಳಿಗೆ ಬೇಕಿದ್ದ ಛೋಟಾ ರಾಜನ್ ಗೆ 1995ರಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದರಿಂದಾಗಿ ಆತ ನಕಲಿ ಪಾಸ್ ಪೋರ್ಟ್ ಪಡೆದು ತನಗೆ ಬೇಕಾದಲ್ಲಿಗೆ ಸುತ್ತಾಡಲು ಸಂಚು ರೂಪಿಸಿದ್ದ.