ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರುವ ಮುನ್ನ ಚೆನ್ನೈನ ಮರೀನಾ ಬೀಚ್ ನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸಮಾಧಿ ಮೇಲೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಮಾಡಿದ್ದ ಶಪಥ ಈಗ ನಿಜವಾಗಿದೆ ಎಂದು ಶನಿವಾರ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಹೇಳಿದ್ದಾರೆ.
ಇಂದು ವಿಶ್ವಾಸಮತ ಸಾಬೀತುಪಡಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ ಅವರು, ವಿಶ್ವಾಸ ಮತ ಗೆಲ್ಲುವ ಮೂಲಕ ಶಶಿಕಲಾ ಅವರ ಶಪಥ ನಿಜವಾಗಿದೆ ಮತ್ತು ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ನೇತೃತ್ವದ ಎಐಎಡಿಎಂಕೆ ಬಂಡಾಯ ಶಾಸಕರಿಗೆ ಮುಖಭಂಗವಾಗಿದೆ ಎಂದರು,
ವಿಧಾಸಭೆಯಲ್ಲಿ ನಾನು ವಿಶ್ವಾಸ ಮತ ಸಾಬೀತಪಡಿಸಿರುವುದರಿಂದ ತಮಿಳುನಾಡಿನ ಜನತೆಗೆ ಸಂತೋಷವಾಗಿದೆ. ಪ್ರತಿಪಕ್ಷ ಡಿಎಂಕೆ ಮಾಡಿದ ಹೈಡ್ರಾಮಾ ಮಾಧ್ಯಮಗಳಲ್ಲಿ ಸೆರೆಯಾಗಿದೆ. ವಿಶ್ವಾಸ ಮತ ತಡೆಯುವುದು ಅವರ ಉದ್ದೇಶವಾಗಿತ್ತು ಎಂದು ಪ್ರತಿಪಕ್ಷಗಳ ವಿರುದ್ಧ ಪಳನಿಸ್ವಾಮಿ ವಾಗ್ದಾಳಿ ನಡೆಸಿದರು.
'ಆದರೆ ಚಿನ್ನಮ್ಮ(ಶಶಿಕಲಾ) ಅವರ ಶಪಥ ಈಗ ನಿಜವಾಗಿದೆ.ಅಮ್ಮ ಮತ್ತು ಎಂಜಿಆರ್ ಅವರ ಕನಸುಗಳನ್ನು ನಾವು ನನಸು ಮಾಡುತ್ತೇವೆ' ಎಂದು ಹೇಳಿದ್ದಾರೆ.