
ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯನ್ನು ಹತ್ಯೆಗೈದ ಮೂವರು ಭಾರತೀಯ ಯೋಧರು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ರಾಷ್ಟ್ರೀಯ ರೈಫಲ್ಸ್ ಘಟಕದ ಮೇಜರ್ ಕುಮಾರ್, ಕ್ಯಾಪ್ಟನ್ ಮಾಣಿಕ್ ಶರ್ಮಾ ಹಾಗೂ ನಾಯಕ್ ಅರವಿಂದ್ ಸಿಂಗ್ ಚೌಹಾಣ್ ಅವರಿಗೆ ಕೇಂದ್ರ ಸರ್ಕಾರ ನಿನ್ನೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಕಳೆದ ಜುಲೈ 8ರಂದು ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹಾಗೂ ಮತ್ತಿಬ್ಬರು ಉಗ್ರರು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರಾಂತ್ಯದ ಬುಮ್ದೂರ ಹಳ್ಳಿಯ ಮನೆಯೊಂದರಲ್ಲಿ ಅಡಗಿದ್ದರು. ಈ ಮಾಹಿತಿ ತಿಳಿದ ಭಾರತೀಯ ಯೋಧರು ಕೂಡಲೇ ಕಾರ್ಯಪ್ರವೃತ್ತರಾಗಿ ಇಡೀ ಗ್ರಾಮವನ್ನು ಸುತ್ತುವರಿದಿದ್ದರು. ಈ ವೇಳೆ ಗ್ರಾಮಸ್ಥರು ಉಗ್ರರನ್ನು ರಕ್ಷಿಸುವ ಸಲುವಾಗಿ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದರು. ಆದರೂ ದೃತಿಗೆಡದ ಮೇಜರ್ ಕುಮಾರ್, ಮಾಣಿಕ್ ಶರ್ಮಾ, ಚೌಹಾಣ್ ನೇತೃತ್ವದ ತಂಡ ಭಾರೀ ಸಾಹಸ ನಡೆಸಿ, ಉಗ್ರರಿದ್ದ ಮನೆ ಪ್ರವೇಶಿಸಿ ಅವರನ್ನು ಹತ್ಯೆಗೈದಿತ್ತು.
ಬುರ್ಹಾನ್ ವಾನಿ ಹತ್ಯೆ ಬಳಿಕ ಈತನ ಜೊತೆಗಿದ್ದ ಇತರೆ ಇಬ್ಬರು ಉಗ್ರರನ್ನು ಸರ್ತಾದ್ ಅಹ್ಮದ್ ಶೇಖ್ ಮತ್ತು ಪರ್ವೇಜ್ ಅಹ್ಮದ್ ಲಷ್ಕರಿ ಎಂದು ಗುರುತಿಸಲಾಗಿತ್ತು. ಇಬ್ಬರೂ ಕಾಶ್ಮೀರದಲ್ಲಿ ಯುವಕರಿಗೆ ಉಗ್ರ ತರಬೇತಿ ನೀಡುತ್ತಿದ್ದರು ಮತ್ತು ಯುವಕರನ್ನು ಉಗ್ರಗಾಮಿ ಸಂಘಟನೆಗೆ ನೇಮಿಸುವ ಕಾರ್ಯ ಮಾಡುತ್ತಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ. ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ವ್ಯಾಪಕ ಹಿಂಸಾಚಾರವಾಗಿತ್ತು, ಜುಲೈನಲ್ಲಿ ಆರಂಭಗೊಂಡ ಹಿಂಸಾಚಾರ ಡಿಸೆಂಬರ್ ಆರಂಭದವರೆಗೂ ನಡೆದಿತ್ತು.
ವಿವಿಧೆಡೆ ನಡೆದ ಹಿಂಸಾಚಾರದಲ್ಲಿ ಸುಮಾರು 85 ನಾಗರಿಕರು ಸಾವನ್ನಪ್ಪಿ, 15 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನ ರಾಜಕೀಯ ಮುಖಂಡರು ಉಗ್ರ ಬುರ್ಹಾನ್ ವಾನಿಯನ್ನು ಕ್ರಾಂತಿಕಾರಿ ನಾಯಕ ಎಂದು ಕರೆಯುವ ಮೂಲಕ ನೇರವಾಗಿಯೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ್ದರು.
Advertisement