ಥಾನೆ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದ ಸಿದ್ಧಾಂತದ ವಿರುದ್ಧ ತಾವು ಹೋರಾಡುತ್ತಿರುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಭಿವಾಂಡಿ ಕೋರ್ಟ್ ಗೆ ಹಾಜರಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, ಗಾಂಧಿಯವರನ್ನು ಕೊಲ್ಲಲಾಯಿತು ಆದರೆ ಅವರ ಉಪದೇಶವನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"ಮಹಾತ್ಮನನ್ನು ಕೊಂದ ಸಿದ್ಧಾಂತದ ವಿರುದ್ಧ ನನ್ನ ಹೋರಾಟ" ಎಂದು ಕೂಡ ರಾಹುಲ್ ಹೇಳಿದ್ದು, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಗಾಂಧಿ ನೆಲೆಸಿದ್ದು ಅದನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.
ಮಹಾತ್ಮ ಹತ್ಯೆಯ ಸಂಬಂಧವಾಗಿ ಆರ್ ಎಸ್ ಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ರಾಹುಲ್ ಈ ಆರ್ ಎಸ್ ಎಸ್ ಮಾನಹಾನಿ ಪ್ರಕರಣದಲ್ಲಿ ಭಿವಾಂಡಿ ಕೋರ್ಟ್ ಗೆ ಹಾಜರಾಗಿದ್ದರು. ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್ ೩ ಕ್ಕೆ ಮುಂದೂಡಲಾಗಿದೆ.
ಮಾರ್ಚ್ ೬ ೨೦೧೪ ರಲ್ಲಿ ಅವರು ಮಾಡಿದ ಭಾಷಣಕ್ಕೆ ವಿರುದ್ಧವಾಗಿ ಆರ್ ಎಸ್ ಎಸ್ ಕಾರ್ಯಕ್ರತ ರಾಜೇಶ್ ಕುಂಟೆ ದೂರು ದಾಖಲಿಸಿದ್ದರು. ಈ ಭಾಷಣದಲ್ಲಿ "ಆರ್ ಎಸ್ ಎಸ್ ಜನರು ಗಾಂಧಿಯನ್ನು ಕೊಂಡಿದ್ದರು" ಎಂದು ರಾಹುಲ್ ಹೇಳಿದ್ದರು.
ಜನವರಿ ೩೦ ೧೯೪೮ ರಲ್ಲಿ ಹಿಂದೂ ರಾಷ್ಟ್ರೀಯವಾದಿ ನಾಥುರಾಮ್ ಘೋಡ್ಸೆ ಮಹಾತ್ಮಗಾಂಧಿಯವರಿಗೆ ಗುಂಡಿಕ್ಕಿ ಕೊಂದಿದ್ದ.