ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿರಚ್ಛೇಧಕ್ಕೆ ಒಂದು ಕೋಟಿ ಬಹುಮಾನ ಘೋಷಿಸಿರುವ ಆರ್ ಎಸ್ ಎಸ್ ಮುಖಂಡನ ಬಗ್ಗೆ ಮೌನವಾರಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರುವಾರ ಸಿಪಿಐ-ಎಂ ಪ್ರಶ್ನಿಸಿದೆ.
ಕೇರಳದಲ್ಲಿ ೩೦೦ ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆಗೆ ವಿಜಯನ್ ಕಾರಣ ಎಂದು ಆರೋಪಿಸಿ, ಮಧ್ಯಪ್ರದೇಶದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕುಂದನ್ ಚಂದ್ರಾವತ್ ಎಂಬ ವ್ಯಕ್ತಿ ಎಡ ಪಕ್ಷದ ಮುಖ್ಯಮಂತ್ರಿಯವರ ಶಿರಚ್ಛೇಧ ಮಾಡಿದವರಿಗೆ ತನ್ನೆಲ್ಲಾ ಆಸ್ತಿ ಮಾರಿ ಒಂದು ಕೋಟಿ ರೂ ನೀಡುವುದಾಗಿ ಘೋಷಿಸಿದ್ದರು.
ಉಜ್ಜಯಿನ್ ನಲ್ಲಿ ಆರ್ ಎಸ್ ಎಸ್ ಮುಖಂಡ ನೀಡಿರುವ ಈ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು.
"ಆರ್ ಎಸ್ ಎಸ್ ಭಯೋತ್ಪಾದಕ ಸಂಸ್ಥೆ ಎಂಬ ನಿಜ ಬಣ್ಣ ಇದರಿಂದ ಬಯಲಾಗಿದೆ. ಈಗಲಾದರೂ ಪ್ರಧಾನಿ ಮತ್ತು ಅವರ ಸರ್ಕಾರ ಮೌನವಾಗಿರದೆ ಕ್ರಮ ತೆಗೆದುಕೊಳ್ಳುವುದೇ?" ಎಂದು ಸಿಪಿಐ-ಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪ್ರಶ್ನಿಸಿದ್ದಾರೆ.
"ಆರ್ ಎಸ್ ಎಸ್ ವಿರುದ್ಧ ಶಿಸ್ತು ಕ್ರಮಕ್ಕೆ ಸಿಪಿಐ-ಎಂ ಆಗ್ರಹಿಸುತ್ತಿದೆ. ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತವೆಯೇ? ಅವರು ಹೊರಬಂದು ಇದನ್ನು ಖಂಡಿಸಲಿದ್ದಾರೆಯೇ?" ಎಂದು ಸಿಪಿಐ-ಎಂ ಪ್ರಶ್ನಿಸಿದೆ.