ಬೆಂಗಳೂರು: ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಶುಕ್ರವಾರ ಹೈಕೋರ್ಟ್ ಜಾಮೀನು ಸಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ನ್ಯಾಯಾಧೀಕರಣಕ್ಕೆ ನೀಡಿದ್ದ ಭರವಸೆ ಉಲ್ಲಂಘನೆ ಆರೋಪ ಸಂಬಂಧ ವಿಚಾರಣೆಗೆ ಜೂನ್ 1ರಂದು ವಿಜಯ್ ಮಲ್ಯ ಅವರನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ಇಂದು ವಿಭಾಗೀಯ ಪೀಠ ಆದೇಶಿಸಿದೆ. ಅಲ್ಲದೆ ಮಲ್ಯ ಅವರಿಂದ 50 ಲಕ್ಷ ರುಪಾಯಿಯ ಮುಚ್ಚಳಿಕೆ ಪಡೆಯುವಂತೆಯೂ ಪೀಠ ಸೂಚಿಸಿದೆ.
ಸಾಲ ಬಾಕಿ ಸಂಬಂಧ ವಿಜಯ್ ಮಲ್ಯ ವಿರುದ್ಧ ಎಸ್ಬಿಐ ಮತ್ತಿತರ ಬ್ಯಾಂಕುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠ, ಜಾಮೀನು ಸಹಿತ ವಾರಂಟ್ ಜಾರಿ ಮಾಡಿದ್ದಾರೆ.