ನವದೆಹಲಿ: ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಕುಲಭೂಷಣ್ ಜಾದವ್ ಪ್ರಕರಣದ ವಿಚಾರಣೆಯನ್ನು ಇದೇ ಮೇ 15ರಿಂದ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಇತ್ತೀಚಗಷ್ಟೇ ಪಾಕಿಸ್ತಾನ ಮಿಲಿಟರಿ ಕೋರ್ಟ್ ಕುಲಭೂಷಣ್ ಜಾದವ್ ಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ತಡೆ ನೀಡಿದ್ದ ಅಂತಾರಾಷ್ಟ್ರೀಯ ನ್ಯಾಯಾಲಯ ಇದೀಗ ಮೇ 15ರಿಂದ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ. ಅಂತಾರಾಷ್ಟ್ರೀಯ ನ್ಯಾಯಾಲಯ ವಿಶ್ವಸಂಸ್ಥೆಯ ಪ್ರಧಾನ ನ್ಯಾಯಾಂಗ ಅಂಗವಾಗಿದ್ದು, ಇದರ ಅಧೀನದಲ್ಲೇ ಕುಲಭೂಷಣ್ ಜಾದವ್ ಪ್ರಕರಣದಗ ವಿಚಾರಣೆ ನಡೆಯಲಿದೆ.
ಸೋಮವಾರ ಕುಲಭೂಷಣ್ ಜಾದವ್ ಅವರನ್ನು ಪಾಕಿಸ್ತಾನ ಈಗಾಗಲೇ ಗಲ್ಲಿಗೇರಿಸಿದೆ ಎಂಬ ಊಹೋಪೋಹಗಳು ಹರಿದಾಡಿದ ಬೆನ್ನಲ್ಲೇ ಭಾರತ ಪ್ರಕರಣ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಅಲ್ಲದೆ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಮುರಿದಿದೆ ಎಂದು ಆರೋಪಿಸಿತ್ತು.
ವಿಯೆನ್ನಾ ಒಪ್ಪಂದದ ಅನ್ವಯ ಪಾಕಿಸ್ತಾನ ಭಾರತ ಮೂಲದ ಕುಲಭೂಷಣ್ ಜಾದವ್ ಅವರನ್ನು ಬಂಧಿಸುತ್ತಿದ್ದಂತೆಯೇ ಭಾರತ ಸರ್ಕಾರಕ್ಕೆ ಮಾಹಿತಿ ನೀಡಬೇಕಿತ್ತು. ಅಂತೆಯೇ ಜಾದವ್ ಗೆ ಕಾನೂನು ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಇದಾವುದೇ ನಿಯಮಗಳನ್ನು ಪಾಕಿಸ್ತಾನ ಪಾಲಿಸದೇ ಏಕಪಕ್ಷೀಯವಾಗಿ ಕುಲಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ವಿಧಿಸಿದೆ. ಒಂದು ವೇಳೆ ಜಾದವ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದೇ ಆದರೆ ಅದು ಕೊಲೆಗೆ ಸಮಾನ ಎಂದು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಹೇಳಿತ್ತು. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಕುಲಭೂಷಣ್ ಜಾದವ್ ಗಲ್ಲು ಶಿಕ್ಷೆ ಪ್ರದಾನಕ್ಕೆ ತಡೆ ನೀಡಿ, ತಾನೇ ಪ್ರಕರಣದ ವಿಚಾರಣೆ ನಡೆಸುವದಾಗಿ ಹೇಳಿತ್ತು.
ವಿದೇಶಾಂಗ ಇಲಾಖೆಯ ತುರ್ತು ಕಾರ್ಯಾಚರಣೆಯ ಫಲ
ಇನ್ನು ವಿದೇಶಾಂಗ ಇಲಾಖೆ ಕುಲಭೂಷಣ್ ಜಾದವ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅತ್ತ ಪಾಕಿಸ್ತಾನ ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಬಗ್ಗುವುದಿಲ್ಲ ಎಂಬ ವಿಚಾರ ಅರಿವಾಗುತ್ತಿದ್ದಂತೆಯೇ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಸ್ತಾಪಿಸುವ ಮೂಲಕ ಚಾಣಾಕ್ಷತನ ಪ್ರದರ್ಶಿಸಿದೆ. ಅಲ್ಲದೆ ಕುಲಭೂಷಣ್ ಜಾದವ್ ಗೆ ಕಾನೂನು ನೆರವು ಮತ್ತು ರಾಯಭಾರ ಕಚೇರಿ ನೆರವು ದೊರೆಯದಂತೆ ತಡೆದ ಪಾಕಿಸ್ತಾನದ ಕ್ರಮ ವಿಯೆನ್ನಾ ಒಪ್ಪಂದ ಸ್ಪಷ್ಟ ಉಲ್ಲಂಘನೆ ಎಂಬುದುನ್ನು ಭಾರತ ಮನದಟ್ಟು ಮಾಡಿಕೊಟ್ಟಿತ್ತು. ಅಷ್ಟು ಮಾತ್ರವಲ್ಲದೇ ಕುಲಭೂಷಣ್ ಜಾದವ್ ಅವರನ್ನು ಇರಾನ್ ನಿಂದ ಪಾಕಿಸ್ತಾನ ಅಪಹರಿಸಿ, ಬಲೂಚಿಸ್ತಾನದಲ್ಲಿ ಅಡಗಿಸಿಟ್ಟಿತ್ತು ಎಂದು ಪ್ರಬಲ ವಾದ ಮಂಡಿಸಿತ್ತು. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರದಾನಕ್ಕೆ ತಡೆ ನೀಡಿತ್ತು.
Advertisement