ಕೇರಳದಲ್ಲಿ ಬೀಫ್ ಮಾರಾಟ ಅಬಾಧಿತ

ಜಾನುವಾರು ಹತ್ಯೆಯ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡಿದ್ದರೂ, ಕೇರಳದಲ್ಲಿ ಶನಿವಾರ ದನದ ಮಾಂಸದ ಮಾರಾಟ ಎಂದಿನಂತೆ ಸರಾಗವಾಗಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ತಿರುವನಂತಪುರಂ: ಜಾನುವಾರು ಹತ್ಯೆಯ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡಿದ್ದರೂ, ಕೇರಳದಲ್ಲಿ ಶನಿವಾರ ದನದ ಮಾಂಸದ ಮಾರಾಟ ಎಂದಿನಂತೆ ಸರಾಗವಾಗಿ ನಡೆದಿದೆ. ಕೇರಳ ನಿವಾಸಿಗಳು ತಮ್ಮ ನೆಚ್ಚಿನ ಆಹಾರ ಬೀಫ್ ಕೊಳ್ಳಲು ಅಂಗಡಿ ಮುಂಗಟ್ಟುಗಳ ಎದುರು ನೆರೆದಿದ್ದು ಸಾಮಾನ್ಯ ದೃಶ್ಯವಾಗಿತ್ತು. 
ಆರ್ ಎಸ್ ಎಸ್ ಅಜೆಂಡಾವನ್ನು ಕೇಂದ್ರ ಸರ್ಕಾರ ಮುಂದು ಮಾಡುತ್ತಿದೆ ಎಂದು ಈ ನಿಯಮಗಳನ್ನು ಖಂಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ನಿಯಮಗಳು ವ್ಯವಹಾರಸಾಧುವಲ್ಲ ಎಂದು ವಿವರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿದ್ದಾರೆ. 
ಮುಖ್ಯಮಂತ್ರಿಯ ಆಪ್ತ ಮೂಲಗಳು ತಿಳಿಸುವಂತೆ, ಈ ನಿಯಮಗಳನ್ನು ಕೇರಳದಲ್ಲಿ ಜಾರಿ ಮಾಡುವುದು ಸುಲಭವಲ್ಲ ಎಂದು ಪತ್ರದಲ್ಲಿ ತಿಳಿಸಲಿದ್ದು, ಇದಕ್ಕೆ ಪ್ರತ್ಯುತ್ತರ ಬರುವವರೆಗೂ ಎಲ್ಲವು ಹಿಂದಿನಂತೆ ನಡೆದುಕೊಂಡು ಹೋಗಲಿದೆ ಎಂದು ತಿಳಿಸಲಿದ್ದಾರಂತೆ. 
ವಿಪಕ್ಷ ನಾಯಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತಾಲ ತ್ರಿಶೂರ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ಈ ವಿಷಯವಾಗಿ ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಡಲಿದ್ದೇವೆ ಎಂದಿದ್ದಾರೆ.
"ಜನರು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬ ವಿಷಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಸಲ್ಲದು. ಈ ವಿಷಯವನ್ನು ನಾವು ಗಟ್ಟಿಯಾಗಿ ಚರ್ಚಿಸಲಿದ್ದೇವೆ" ಎಂದು ಕೂಡ ಅವರು ಹೇಳಿದ್ದಾರೆ. 
ಪಾಲಕ್ಕಾಡ್ ಜಿಲ್ಲೆಯ ಕೇರಳದ ಅತಿ ದೊಡ್ಡ ಜಾನುವಾರು ಮಾರುಕಟ್ಟೆಯಲ್ಲಿ ಕೂಡ ದನಗಳ ಕೊಳ್ಳುವ-ಮಾರಾಟ ಪ್ರಕ್ರಿಯೆ ಎಂದಿನಂತೆ ಸರಾಗವಾಗಿ ನಡೆದಿದೆ. "ರಾಜ್ಯ ಸರ್ಕಾರ ಈ ನಿಯಮಗಳನ್ನು ಜಾರಿ ಮಾಡಿದರೆ ಏನು ಗತಿ ಎಂಬ ಆತಂಕ ನಮಗೆ ಉಂಟಾಗಿದೆ. ಅದು ಸಾಧುವಲ್ಲ ಎಂಬ ಸಂದೇಹ ಕೂಡ ನಮಗಿದೆ. ಯಾವುದಕ್ಕೂ ನಾವು ಕಾಯುತ್ತೇವೆ" ಎಂದು ದನಗಳ ಮಾರಾಟಗಾರರ ಗುಂಪು ಆತಂಕ ವ್ಯಕ್ತಪಡಿಸಿದೆ. 
ಈ ಮಧ್ಯೆ ಎಲ್ಲ ರಾಜಕೀಯ ಪಕ್ಷಗಳು ಈ ಹೊಸ ನಿಯಮಗಳು ಮೂರ್ಖತನದ ಪರಮಾವಧಿ ಎಂದು ಖಂಡಿಸಿದ್ದರೆ, ಕೇರಳದ ಭಾರತೀಯ ಜನತಾ ಪಕ್ಷ, ಮಾಧ್ಯಮಗಳ ಮೇಲೆ ಆರೋಪ ಹೊರಿಸಿ, ನಿಜ ಅಂಶಗಳನ್ನು ತಿರುಚಿ ಅನಗತ್ಯ ವಿವಾದಗಳನ್ನು ಎಬ್ಬಿಸಿದೆ ಎಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com